ಲೋಕಸಭೆ ಚುನಾವಣೆ ಬಳಿಕ ರಾಜ್ಯಾಧ್ಯಕ್ಷ ಪಟ್ಟ ಕಳೆದುಕೊತ್ತಾರೆ ಎಂಬ ಈಶ್ವರಪ್ಪ ಹೇಳಿಕೆಗೆ ವಿಜಯೇಂದ್ರ ಟಾಂಗ್​

Lok Sabha Election 2024: ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಕಾಂತೇಶ್​ಗೆ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಬಿಎಸ್​ ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲೆ ಮುನಿಸಿಕೊಂಡಿದ್ದಾರೆ. ಬಿಎಸ್​ ಯಡಿಯೂರಪ್ಪ ಕುಟುಂಬದ ವಿರುದ್ಧ ನಿರಂತರವಾಗಿ ವಾಗ್ದಾಳಿ ಮಾಡುತ್ತಾ ಬಂದಿರುವ ಅವರು, ಇದೀಗ ಲೋಕಸಭೆ ಚುನಾವಣೆ ಬಳಿಕ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಶಿವಮೊಗ್ಗ/ ನವದೆಹಲಿ ಮಾರ್ಚ್​ 20: ಲೋಕಸಭೆ ಚುನಾವಣೆ (Lok Sabha Election) ಫಲಿತಾಂಶದ ಬಳಿಕ ಬಿವೈ ವಿಜಯೇಂದ್ರ (BY Vijyayendra) ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ (KS Ehwarappa) ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ಕೆ.ಎಸ್​. ಈಶ್ವರಪ್ಪ ಸ್ಪರ್ಧೆ ಬಗ್ಗೆ ಇಡೀ ರಾಜ್ಯದಲ್ಲಿ ಚರ್ಚೆ ಆಗುತ್ತಿದೆ. ನನ್ನ (ಈಶ್ವರಪ್ಪ) ಪುತ್ರ ಕಾಂತೇಶ್​​ಗೆ ವಿಧಾನಪರಿಷತ್​ ಸ್ಥಾನ ಕೊಡುತ್ತೇವೆ ಅಂತ ಹೇಳಿದ್ದರು. ನನ್ನನ್ನು (ಈಶ್ವರಪ್ಪ) ರಾಜ್ಯಪಾಲರನ್ನಾಗಿ ಮಾಡುತ್ತೇವೆ ಅಂತ ಬಿಜೆಪಿ ವರಿಷ್ಠರು ಹೇಳಿದ್ದರು. ಆದರೆ ನನಗೆ ಸ್ಥಾನಮಾನಗಳು ಬೇಡ, ಪಕ್ಷ ಉಳಿಯಬೇಕು ಅಷ್ಟೆ ಎಂದು ಬಿಜೆಪಿ ನಾಯಕ ಕೆಎಸ್​. ಈಶ್ವರಪ್ಪ ಹೇಳಿದರು.

ಒಂದು ಅವಧಿಗೆ ನೇಮಕ ಮಾಡಿದ್ದಾರೆ ಅಂತ ಭಾವಿಸುತ್ತೇನೆ: ವಿಜಯೇಂದ್ರ
ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ರಾಜ್ಯಾಧ್ಯಕ್ಷ ಹುದ್ದೆ ಕಳೆದುಕೊಳ್ಳುತ್ತಾರೆ ಎಂಬ ಕೆಎಸ್​ ಈಶ್ವರಪ್ಪ ಹೇಳಿಕೆ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿ, “ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಒಂದು ಅವಧಿಗೆ ನನ್ನನ್ನು ನೇಮಕ ಮಾಡಿದ್ದಾರೆ ಅಂತ ಭಾವಿಸುತ್ತೇನೆ. ನನಗೆ ಸ್ಥಾನಮಾನ ಬೇಡ, ಪಕ್ಷ ಉಳಿಯಬೇಕು ಅಷ್ಟೆ” ಎಂದರು.

ಘೋಷಣೆ ಆಗಿರುವ ಅಭ್ಯರ್ಥಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಬಂಡಾಯ ಅಭ್ಯರ್ಥಿಗಳ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಯಾವುದೇ ಕ್ಷೇತ್ರದಲ್ಲಿ ಒಮ್ಮತದ ನಿರ್ಧಾರ ಆಗುವುದಿಲ್ಲ. ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಾಗಿದೆ. ಅಭ್ಯರ್ಥಿಗಳ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಬಾಕಿ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗಿದೆ. ಮಾ.22ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಬಾಕಿ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಲಿದೆ. ಆ ಬಳಿಕ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ. ಸಭೆಯಲ್ಲಿ ಚರ್ಚಿಸಲಾದ ಎಲ್ಲ ವಿಷಯಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದರು.

ಹಿಂದುತ್ವದ ಕಾರಣಕ್ಕಾಗಿ ಈಶ್ವರಪ್ಪ ಸ್ಪರ್ಧೆ: ಕಾಂತೇಶ್​​
ಹಿಂದುತ್ವದ ಕಾರಣಕ್ಕಾಗಿ ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪಗೆ ಉತ್ತಮ ಬೆಂಬಲ ಸಿಗುತ್ತಿದೆ. ಎಷ್ಟೇ ಮನವೊಲಿಸಿದರೂ ಸ್ಪರ್ಧಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಪಕ್ಷ ಉಳಿಯಬೇಕು ಎಂಬುದು ಕಾರ್ಯಕರ್ತರ ಆಶಯವಾಗಿದೆ. ಕೆ.ಎಸ್​. ಈಶ್ವರಪ್ಪಗೆ ಕಾರ್ಯಕರ್ತರ ಬೆಂಬಲ ಕೂಡ ಸಿಗುತ್ತಿದೆ ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶ್ ಹೇಳಿದರು.