ಕಾಂಗ್ರೆಸಿಗರೇ ಡೆಲ್ಲಿಗೆ ಹೋಗಿದ್ರಲ್ಲ, ಈಗ ಚೆನ್ನೈಗೆ ಹೋಗಿ ನೋಡೋಣ ; ಅಶೋಕ್‌ ಸವಾಲು

Mekedatu project : ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ನಮ್ಮ ಹಣ ನಮ್ಮ ಹಕ್ಕು ಎಂದು ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿದ್ರಲ್ಲ, ಅದೇ ರೀತಿ ನಮ್ಮ ನೀರು ನಮ್ಮ ಹಕ್ಕು ಅಂತ ಚೆನ್ನೈಯಲ್ಲಿ ಪ್ರತಿಭಟನೆ ಮಾಡಲಿ ಎಂದು ಸವಾಲು ಹಾಕಿದ್ದಾರೆ ಆರ್‌. ಅಶೋಕ್.

ಬೆಂಗಳೂರು ಮಾರ್ಚ್‌ 21 : ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯನವರು (CM Siddaramaiah) ಕಾಂಗ್ರೆಸ್‌ನ 136 ಜನ ಶಾಸಕರನ್ನು ಕರೆದುಕೊಂಡು ಹೋಗಿ ಅಲ್ಲೇ ಕಾಫಿ ಕುಡಿದು ಚೆನ್ನೈನಲ್ಲಿ ಡಿಎಂಕೆ ಕಚೇರಿ (DMK Office) ಮುಂದೆ ‘ನಮ್ಮ ನೀರು ನಮ್ಮ ಹಕ್ಕು’ (Namma Neeru Namma Hakku) ಘೋಷಣೆಯೊಂದಿಗೆ ಹೋರಾಟ ಮಾಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ (BJP Leader R Ashok) ಅವರು ಸಲಹೆ ನೀಡಿದ್ದಾರೆ. ಡಿಎಂಕೆ ಪಕ್ಷವು ಮೇಕೆದಾಟು ಯೋಜನೆಯನ್ನು (Mekedatu Project) ತಡೆಯುವುದಾಗಿ ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ (DMK Election Manifesto) ಘೋಷಿಸಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ನಗರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ಹಣ ನಮ್ಮ ಹಕ್ಕು ಎಂದು ಘೋಷಣೆಯೊಂದಿಗೆ ದೆಹಲಿಯಲ್ಲಿ 136 ಕಾಂಗ್ರೆಸ್ ಶಾಸಕರು ಹೋರಾಟ ಮಾಡಿದ್ದರು. ಅದೇ ಮಾದರಿಯಲ್ಲಿ ಚೆನ್ನೈನಲ್ಲಿ ಹೋರಾಟ ಮಾಡುವಂತೆ ಸಲಹೆ ಕೊಟ್ಟರು.

ರಾಜ್ಯದ ಹಿತ ಮುಖ್ಯವೇ ಅಥವಾ INDI ಮೈತ್ರಿ ಮುಖ್ಯವೇ ಎಂಬ ಪರ್ವ ಕಾಲದಲ್ಲಿ ಕಾಂಗ್ರೆಸ್ಸಿಗರು ಇದ್ದಾರೆ ಎಂದು ತಿಳಿಸಿದರು. ರಾಜ್ಯದ ಜನತೆ ನಿಮ್ಮನ್ನು ನಂಬಬೇಕಿದ್ದರೆ, ನುಡಿದಂತೆ ನಡೆಯುವವರು ಎಂದು ತೋರಿಸುವುದಾದರೆ ಮೈತ್ರಿ ಮುಖ್ಯವೇ ರಾಜ್ಯದ ಹಿತ ಮುಖ್ಯವೇ ಎಂದು ತೀರ್ಮಾನ ಮಾಡಿ ಎಂದು ಆರ್‌. ಅಶೋಕ್‌ ಆಗ್ರಹಿಸಿದರು.

ಹಿಂದೆ ಮಹಾದಾಯಿ ಸಂಬಂಧ ಗೋವಾದಲ್ಲಿ ಸೋನಿಯಾ ಗಾಂಧಿಯವರು ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಹೇಳಿದ್ದರು. ಈಗ ಮತ್ತೊಮ್ಮೆ ಡಿಎಂಕೆ ಮುಖಾಂತರ ಈ ಮಾತನ್ನಾಡಿಸಿದ್ದಾರೆ ಎಂದು ಆಕ್ಷೇಪ ಸೂಚಿಸಿದರು.

ಒಳ್ಳೆಯ ಸಲಹೆ ಕೊಟ್ಟಿದ್ದೇನೆ, ತೆಗೆದುಕೊಳ್ಳಿ ನೋಡೋಣ
ವಿಪಕ್ಷದ ನಾಯಕರು ರಾಜ್ಯದ ಹಿತದೃಷ್ಟಿಯಿಂದ ಸಲಹೆ ನೀಡಿದರೆ ನಾನು ಅದನ್ನು ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ. ನಾನು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯರಿಗೆ ಒಳ್ಳೆಯ ಸಲಹೆ ನೀಡುತ್ತೇನೆ ಎಂದು ತಿಳಿಸಿದರು. ಇವರಲ್ಲಿ ಯಾರು ಫಸ್ಟ್ ಯಾರು ಸೆಕೆಂಡ್ ಎಂಬ ಗೊಂದಲದಲ್ಲಿ ನಾನಿದ್ದೇನೆ. ಯಾವಾಗ ಯಾರು ಸಿಎಂ ಎಂದೇ ಗೊತ್ತಾಗುವುದಿಲ್ಲ. ಸಿಎಂ, ಸೂಪರ್ ಸಿಎಂ, ಭಾವಿ ಸಿಎಂ, ಶ್ಯಾಡೋ ಸಿಎಂ ಇರುವುದಾಗಿ ಪ್ರಧಾನಿಯವರೇ ಹೇಳಿದ್ದಾರೆ ಎಂದು ಆರ್‌. ಅಶೋಕ್‌ ಗಮನ ಸೆಳೆದರು.

ಕರ್ನಾಟಕದಲ್ಲಿ ವೀಕ್ ಸಿಎಂ ಇದ್ದಾರೆ; ವೀಕ್ ಗವರ್ನಮೆಂಟ್ ಇದೆ ಎಂದ ಅವರು, ಈ ದೌರ್ಬಲ್ಯವನ್ನು ಉಪಯೋಗಿಸಿ ಇಂಡಿ ಒಕ್ಕೂಟದ ಮುಖ್ಯ ಪಾಲುದಾರ ಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ (Mekedatu project) ಅನುಷ್ಠಾನಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದಿದೆ ಎಂದು ಆಕ್ಷೇಪಿಸಿದರು.‌

ಸ್ಟಾಲಿನ್‌-ಡಿಕೆಶಿ ಜತೆಗಿರುವ ಫೋಟೊ ಪ್ರದರ್ಶಿಸಿ ಗೇಲಿ

ಇದು ಹೇಳಿಕೆಯಲ್ಲ; ಇದು ಪ್ರಣಾಳಿಕೆಯಲ್ಲಿರುವ ವಿಚಾರ ಎಂದ ಅವರು, ಮೇಕೆದಾಟು ಯೋಜನೆಗೆ ಸಂಬಂಧಿಸಿ ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷಣೆಯಡಿ ಕೋವಿಡ್ ಸಂದರ್ಭದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆ ಮಾಡಿದ್ದರು. ಇದು ಬಹಳ ಗಂಭೀರ ವಿಚಾರ; ಪ್ರಾಣ ತ್ಯಾಗ ಮಾಡಿಯಾದರೂ ಈ ಯೋಜನೆ ಮಾಡುವುದಾಗಿ ತಿಳಿಸಿದ್ದರು. ಈಗ ಅವರದೇ ಕ್ಲೋಸ್ ಫ್ರೆಂಡ್, ನಿಯರೆಸ್ಟ್ ಆಂಡ್ ಡಿಯರೆಸ್ಟ್ ಫ್ರೆಂಡ್ ಸ್ಟಾಲಿನ್ ಈ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಎಂದ ವ್ಯಂಗ್ಯವಾಡಿದರು. ಇದೇವೇಳೆ ಅವರು ಶಿವಕುಮಾರ್- ಸ್ಟಾಲಿನ್, ಸಿದ್ದರಾಮಯ್ಯ- ಸ್ಟಾಲಿನ್ ಜೊತೆಗಿರುವ ಭಾವಚಿತ್ರಗಳನ್ನೂ ಪ್ರದರ್ಶಿಸಿದರು.