3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಅಸ್ತಿಪಂಜರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.!

ಕಾರವಾರ: ಮೂರು ತಿಂಗಳುಗಳಿಂದ ನಾಪತ್ತೆಯಾಗಿದ್ದ ಇಲ್ಲಿನ ಬೈತಖೋಲದ ಯುವಕನ ಅಸ್ತಿಪಂಜರ ಬೈತಖೋಲದ ಗುಡ್ಡದಲ್ಲಿ ಸೋಮವಾರ ಪತ್ತೆಯಾಗಿದ್ದು ಅನುಮಾನಾಸ್ಪದವಾಗಿದ್ದ ಈ ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಿದೆ. ಕಾರವಾರದ ಬೈತಖೋಲದ ನಿವಾಸಿ ಸಂಜಯ ಹೆದ್ದು ಗೌಡ (38) ಮೃತ ಯುವಕ.

ಈತ ಮೇ 14 ರಂದು ರಾತ್ರಿ ನೀರಿನ ಬಾಟಲ್ ಹಿಡಿದುಕೊಂಡು ಬಹಿರ್ದೆಸೆಗೆಂದು ಹೋದವನು ವಾಪಸ್ಸು ಮನೆಗೆ ಮರಳಿ ಬಂದಿರಲಿಲ್ಲ. ಗ್ರಾಮಸ್ಥರು ಈತನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದರಾದರೂ ಎಲ್ಲೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಪೊಲೀಸರು ಕೂಡ ಹುಡುಕಾಟಕ್ಕೆ ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ.

ಇದಾದ ಬಳಿಕ ಈತನ ತಾಯಿಯು ಎಸ್ಪಿ ಕಚೇರಿಗೆ ಬಂದು ತನ್ನ ಮಗನನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ ಘಟನೆಯೂ ನಡೆದಿತ್ತು. ಇದೀಗ ಸೋಮವಾರ ಯಾರೋ ಬೈತಖೋಲ ಬಳಿಯ ಗುಡ್ಡಕ್ಕೆ ಹೋದವರಿಗೆ ಅಸ್ತಿ ಪಂಜರವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತ ಧರಿಸಿದ್ದ ಚಪ್ಪಲಿಯಿಂದಾಗಿ ಇದು ನಾಪತ್ತೆಯಾಗಿದ್ದ ಸಂಜಯನ ಮೃತದೇಹ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮೃತನ ಸಂಭಂದಿಯೋರ್ವರು ಸೋಮವಾರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.