ಏಕಾಂಗಿಯಾಗಿ ಬಾವಿ ತೋಡಿ ಕೊನೆಗೂ ನೀರು ತರಿಸಿದ ಗೌರಿ ನಾಯ್ಕ್

ಶಿರಸಿ:- ಸಾಕಷ್ಟು ಹಗ್ಗ ಜಗ್ಗಾಟದ ನಂತರ, ಭಗೀರಥನಂತೆ ಏಕಾಂಗಿಯಾಗಿ ಬಾವಿ (Well) ತೋಡಿ ಗೌರಿ ನಾಯ್ಕ್ ಕೊನೆಗೂ ನೀರು ತರಿಸಿದ್ದಾರೆ. ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿ (Sirsi) ತಾಲೂಕಿನ ಗಣೇಶನಗರದಲ್ಲಿ ಅಂಗನವಾಡಿ (Anganwadi) ಮಕ್ಕಳಿಗಾಗಿ ತೋಡಿದ 45 ಅಡಿ ಆಳದ ಬಾವಿಯಲ್ಲಿ ನೀರು ಉಕ್ಕಿದ್ದು, ಇದನ್ನು ಕಂಡ ಗೌರಿ ನಾಯ್ಕ್ ಭಾವುಕರಾಗಿದ್ದಾರೆ.

2 ತಿಂಗಳು ಕಾಲ ಬಾವಿ ತೋಡಿದ ಗೌರಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರದಲ್ಲಿ ಬೇಸಿಗೆ ಬಂತೆಂದರೇ ನೀರಿನ ಕೊರತೆಯಿಂದ ಜನರು ಪರದಾಡುತ್ತಾರೆ. ಇನ್ನು ಬೇಸಿಗೆ ಕಾಲದಲ್ಲಿ ಗ್ರಾಮ ಪಂಚಾಯಿತಿ ವಾರದಲ್ಲಿ ಎರಡು ದಿನ ನೀರು ಬಿಡುತ್ತದೆ. ಆದರೆ ಈ ನೀರು ಕುಡಿಯಲು ಸಹ ಸಾಲುವುದಿಲ್ಲ. ಅಲ್ಲದೆ ಈ ನೀರು ಶುದ್ಧವಾಗಿರುವುದಿಲ್ಲ ಎಂಬ ಆರೋಪವೂ ಇದೆ. ಮತ್ತು ಗಣೇಶನಗರದಲ್ಲಿ ಅಂಗನವಾಡಿಯೊಂದು ಇದ್ದು, ಮಕ್ಕಳಿಗೆ ಕುಡಿಯಲು ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಇದನ್ನು ಮನಗಂಡ ಗೌರಿ ನಾಯ್ಕ್​ ಅವರು ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡಲು ಪ್ರಾರಂಭಿಸಿದ್ದರು.

ಜನವರಿ 30 ರಿಂದ ಗೌರಿನಾಯ್ಕ ಅವರು ಅಂಗನವಾಡಿಯ ಆವರಣದಲ್ಲಿ ಯಾರ ಸಹಾಯವನ್ನೂ ಪಡೆಯದೇ ಬಾವಿ ತೋಡಲು ಆರಂಭಿಸಿದ್ದರು. ಇವರು ಏಕಾಂಗಿಯಾಗಿ 30 ಅಡಿ ಬಾವಿ ತೋಡಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಮಕ್ಕಳಿಗೆ ಕುಡಿಯುವ ನೀರು ಪೂರೈಸುವಲ್ಲಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಸರ್ಕಾರಕ್ಕೆ ಛೀಮಾರಿ ಹಾಕಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿರಸಿ ವಿಭಾಗದ ಸಿಡಿಪಿಓ ವೀಣಾ ಶಿರ್ಸಿಕರ್ ಅವರು ಭದ್ರತೆ ಕಾರಣ ನೀಡಿ ಬಾವಿ ಮುಚ್ಚುವಂತೆ ಫೆ.12 ರಂದು ನೋಟಿಸ್​ ನೀಡಿದ್ದರು. ಸರ್ಕಾರದ ನೋಟಿಸ್​ಗೆ ಬಗ್ಗದ ಗೌರಿ ಅವರು ಬಾವಿ ತೋಡುವುದನ್ನು ಮುಂದುವರೆಸಿದ್ದರು. ಆದರೆ ಫೆ.19 ರಂದು ಅಧಿಕಾರಿಗಳು ಸ್ಥಳಕ್ಕೆ ಬಂದು ಹಲಗೆಯಿಂದ ಬಾವಿ ಮುಚ್ಚಿದ್ದರು.

ಇದನ್ನು ವಿರೋಧಿಸಿ ಗೌರಿ ನಾಯ್ಕ ಹಾಗೂ ಅವರು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಫೆ.21 ರಂದು ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವಿಚಾರ ಟಿವಿ9ನಲ್ಲಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಸಂಸದ ಅನಂತಕುಮಾರ್ ಹೆಗಡೆ ಭೇಟಿ ನೀಡಿದ್ದರು. ಸ್ಥಳದಿಂದಲೇ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್​ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಬಾವಿ ತೋಡಲು ಅನುಮತಿ ನೀಡುವಂತೆ ತಾಕೀತು ಮಾಡಿದ್ದರು. ಆಗ ಜಿಲ್ಲಾಧಿಕಾರಿಗಳು ಬಾವಿ ತೋಡಲು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಬಳಿಕ ಗೌರಿ ನಾಯ್ಕ್​ ಅವರೊಂದಿಗೆ ಮಾತನಾಡಿದ ಅನಂತ ಕುಮಾರ್​ ಹೆಗಡೆ ಬಾವಿ ತೋಡುವುದನ್ನು ಮುಂದುವರಿಸಿ, ನೀರು ಬಂದ ನಂತರ ಬಾವಿಗೆ ಗೌರಿ ಅಂತ ಹೆಸರಿಡುವ ಭರವಸೆ ನೀಡಿದ್ದರು. ಇದಾದ ಬಳಿಕ ಗೌರಿ ನಾಯ್ಕ್​ ಮತ್ತೆ ಬಾವಿ ತೋಡಲು ಆರಂಭಿಸಿದ್ದು, ಇದೀಗ ಗಂಗೆ ಉಕ್ಕಿದ್ದಾಳೆ.