‘ಬರೆಯದ ಮೌನದ ಕವಿತೆ..’ ಗಾಯಕ ಪಂಕಜ್​ ಉಧಾಸ್​ ಇನ್ನಿಲ್ಲ; ತೀವ್ರ ಅನಾರೋಗ್ಯದಿಂದ ನಿಧನ

‘ಸ್ಪರ್ಶ’ ಚಿತ್ರದಲ್ಲಿನ ‘ಬರೆಯದ ಮೌನದ ಕವಿತೆ ಹಾಡಾಯಿತು..’ ಮತ್ತು ‘ಚಂದಕಿಂತ ಚಂದ ನೀನೇ ಸುಂದರ..’ ಗೀತೆಗಳು ಪಂಕಜ್​ ಉಧಾಸ್​ ಅವರ ಕಂಠದಲ್ಲಿ ಮೂಡಿಬಂದಿದ್ದವು. ಇಂದು ಪಂಕಜ್​ ಉಧಾಸ್​ ಅವರ ನಿಧನಕ್ಕೆ ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಕಂಬಿನಿ ಮಿಡಿಯುತ್ತಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಜನಪ್ರಿಯ ಗಾಯಕ ಪಂಕಜ್​ ಉಧಾಸ್​ ಅವರು ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. 73ರ ಪ್ರಾಯದ ಅವರು ಇಂದು (ಫೆಬ್ರವರಿ 26) ಕೊನೆಯುಸಿರು ಎಳೆದರು. ಅವರ ನಿಧನದ ಸುದ್ದಿಯನ್ನು ಪುತ್ರಿ ನಯಾಬ್​ ಉಧಾಸ್​ ಖಚಿತಪಡಿಸಿದ್ದಾರೆ. 1980ರ ದಶಕದಲ್ಲಿ ಪಂಕಜ್​ ಉಧಾಸ್​ ಅವರು ಗಝಲ್​ ಗಾಯನದ ಮೂಲಕ ಫೇಮಸ್​ ಆಗಿದ್ದರು. ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್‌ನ ಅನೇಕ ಸೂಪರ್​ ಹಿಟ್​ ಹಾಡುಗಳಿಗೆ ಅವರು ಧ್ವನಿ ನೀಡಿದ್ದರು. ಕಿಚ್ಚ ಸುದೀಪ್​ ಅಭಿನಯದ ‘ಸ್ಪರ್ಶ’ ಸಿನಿಮಾದ ಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರನ್ನು ಅವರು ರಂಜಿಸಿದ್ದರು.

ಪಂಕಜ್​ ಉಧಾಸ್​ ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ‘ಸ್ಪರ್ಶ’ ಸಿನಿಮಾದಲ್ಲಿನ ‘ಬರೆಯದ ಮೌನದ ಕವಿತೆ ಹಾಡಾಯಿತು..’, ‘ಚಂದಕಿಂತ ಚಂದ ನೀನೇ ಸುಂದರ..’ ಹಾಡುಗಳು ಪಂಕಜ್​ ಉಧಾಸ್​ ಅವರ ಕಂಠದಲ್ಲಿ ಮೂಡಿಬಂದಿದ್ದವು. ಕೇಳುಗರ ಫೇವರಿಟ್​ ಲಿಸ್ಟ್​ನಲ್ಲಿ ಈ ಹಾಡುಗಳು ಈಗಲೂ ಜಾಗ ಪಡೆದುಕೊಂಡಿವೆ. ಪಂಕಜ್​ ಉಧಾಸ್​ ಅವರ ಅಗಲಿಕೆಗೆ ಕರುನಾಡಿನಲ್ಲಿನ ಅಭಿಮಾನಿಗಳು ಕೂಡ ಕಂಬಿನಿ ಮಿಡಿಯುತ್ತಿದ್ದಾರೆ.