ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಸಹಾಯ ಮಾಡಿದ ‘ಸಾವರ್ಕರ್​’ ಚಿತ್ರದ ನಟ ರಣದೀಪ್​ ಹೂಡಾ

ನಟ ರಣದೀಪ್​ ಹೂಡಾ ಅವರು ಸಿನಿಮಾಗಳಿಂದ ಮಾತ್ರವಲ್ಲದೇ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೂ ಜನರಿಗೆ ಇಷ್ಟ ಆಗಿದ್ದಾರೆ. ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ಅವರಿಗೆ ಸಖತ್​ ಬೇಡಿಕೆ ಇದೆ. ಈಗ ಅವರು ಒಂದು ಪುಣ್ಯದ ಕೆಲಸ ಮಾಡಿ ಸುದ್ದಿ ಆಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶದ ಜನರಿಗೆ ರಣದೀಪ್​ ಹೂಡಾ ಅವರು ಸಹಾಯ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ನಟನ ಈ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಸ್ವಾತಂತ್ರ್ಯ ವೀರ್​ ಸಾವರ್ಕರ್​’ ಸಿನಿಮಾದಲ್ಲಿ ರಣದೀಪ್​ ಹೂಡಾ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಜನರಿಗೆ ನಿರೀಕ್ಷೆ ಇದೆ.

ಹರಿಯಾಣದಲ್ಲಿ ಪ್ರವಾಹದಿಂದ ತತ್ತರಿಸಿದ ಪ್ರದೇಶಗಳಿಗೆ ರಣದೀಪ್​ ಹೂಡಾ ಭೇಟಿ ನೀಡಿದ್ದಾರೆ. ತಲೆಗೆ ಕೇಸರಿ ಬಟ್ಟೆ ಕಟ್ಟಿಕೊಂಡು, ಜನರಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವ ಅವರ ಫೋಟೋ ಮತ್ತು ವಿಡಿಯೋ ವೈರಲ್​ ಆಗಿದೆ. ಜಲಾವೃತ ಪ್ರದೇಶಗಳಲ್ಲಿ ಅವರು ಸಂಚರಿಸಿದ್ದಾರೆ. ಅಲ್ಲಿನ ಜನರಿಗೆ ಕುಡಿಯುವ ನೀರು, ಅಡುಗೆ ಸಾಮಾಗ್ರಿ, ಬಟ್ಟೆ ಮುಂತಾದ ವಸ್ತುಗಳನ್ನು ನೀಡಿದ್ದಾರೆ. ರಣದೀಪ್ ಹೂಡಾ ಅವರು ಈ ರೀತಿ ಸಹಾಯ ಮಾಡಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕೇರಳದಲ್ಲಿ ಪ್ರವಾಹ ಉಂಟಾದಾಗಲೂ ಅವರು ಜನರ ನೆರವಿಗೆ ಧಾವಿಸಿದ್ದರು.

2001ರಿಂದಲೂ ರಣದೀಪ್​ ಹೂಡಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಷ್ಟು ದಿನ ನಟನಾಗಿ ಗುರುತಿಸಿಕೊಂಡಿದ್ದ ಅವರು ಈಗ ನಿರ್ದೇಶನದಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ‘ಸ್ವಾತಂತ್ರ್ಯ ವೀರ್​ ಸಾವರ್ಕರ್​’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸುವುದರ ಜೊತೆಗೆ ನಿರ್ದೇಶನವನ್ನೂ ಅವರೇ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್​ ಮುಗಿದಿದೆ. ಸಾವರ್ಕರ್​ ಜೀವನದ ಕುರಿತು ಈ ಚಿತ್ರ ನಿರ್ಮಾಣ ಆಗುತ್ತಿರುವುದರಿಂದ ಕೌತುಕ ಮೂಡಿದೆ.

‘ಸ್ವಾತಂತ್ರ್ಯ ವೀರ್​ ಸಾವರ್ಕರ್​’ ಸಿನಿಮಾ ಮಾತ್ರವಲ್ಲದೇ ರಣದೀಪ್​ ಹೂಡಾ ಅವರ ಕೈಯಲ್ಲಿ ಇನ್ನೂ ಅನೇಕ ಪ್ರಾಜೆಕ್ಟ್​ಗಳಿಗೆ. ‘ಅನಾರಿ ಈಸ್​ ಬ್ಯಾಕ್​’, ‘21: ಬ್ಯಾಟಲ್​ ಆಫ್​ ಸರ್​ಗಡಿ’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಈ ಎಲ್ಲ ಸಿನಿಮಾದ ಕೆಲಸಗಳನ್ನು ಬದಿಗೊತ್ತಿ ಜನರ ಸಹಾಯಕ್ಕೆ ಬಂದಿರುವ ರಣದೀಪ್​ ಹೂಡಾ ಅವರಿಗೆ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ.