ಐತಿಹಾಸಿಕ ಕಡವಾಡದ ನಂದವಾಳದಲ್ಲಿ ವಿಜಯ ದಿವಸ ಆಚರಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್.‌ ನಾಯ್ಕ

ಕಾರವಾರ : ದೇಶದಲ್ಲೇ ಮೊಟ್ಟ ಮೊದಲು ಬ್ರಿಟೀಷರನ್ನು ಹೊರದಬ್ಬಿ, ಅವರ ಧ್ವಜವನ್ನು ಇಳಿಸಿ ಸ್ವಾತಂತ್ರ್ಯ ಘೋಷಿಸಿದ ಸೋದೆ ಸದಾಶಿವರಾಯರ ಸಾಹಸ ಗಾಥೆಯ ಸ್ಮರಣಾರ್ಥವಾಗಿ ಕಡವಾಡ ಬಳಿಯ ಐತಿಹಾಸಿಕ ನಂದವಾಳದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್‌. ನಾಯ್ಕ ವಿಜಯ ದಿವಸ ಆಚರಿಸಿದ್ರು..

ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್.ಎಸ್ ಹೆಗಡೆ, ವೆಂಕಟೇಶ್ ನಾಯಕ್, ಜಿ.ಜಿ ಹೆಗಡೆ ಜೊತೆ ಬೆಳಗ್ಗೆ  ಶೇಜವಾಡ ಶೆಜೇಶ್ವರ ದೇವಾಲಯದಿಂದ ನಂದವಾಳದವರೆಗೆ ನೂರಾರು ಕಾರ್ಯಕರ್ತರ ಜೊತೆ ಬೈಕ್ ರ್ಯಾಲಿ ನಡೆಸಿದ್ರು.

ಬೆಳಗ್ಗೆ 11 ಗಂಟೆಗೆ ನಂದವಾಳದಲ್ಲಿ ಧ್ವಜಾರೋಹಣ ನಡೆಸಿ, ವಿಜಯ ದಿವಸ ಸಮಾರಂಭ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಕಾರ್ಯಕ್ರಮವನ್ನು ಬಿಜೆಪಿಯ ಜಿಲ್ಲಾಧ್ಯಕ್ಷರಾದ ಎನ್.ಎಸ್ ಹೆಗಡೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್.‌ ನಾಯ್ಕ್ ಮಾತನಾಡಿ,  ನಮ್ಮ ನಾಡು-ನುಡಿ, ನೆಲದ ರಕ್ಷಣೆಗೆ ಜೀವದ ಹಂಗು ತೊರೆದು ಹೋರಾಡಿದ ಸೋದೆ ಅರಸರು ನಮಗೆಲ್ಲ ಆದರ್ಶ ಪ್ರಾಯರಾಗಿದ್ದು, ಅವರು ನಡೆಸಿದ ವಿಜಯೋತ್ಸವದ ಹಿನ್ನೆಲೆಯಲ್ಲಿ ನಡೆಸುವ ವಿಜಯ ದಿವಸ ಈ ದಿನ. ಈ ಕಾರ್ಯಕ್ರಮ ಕೇವಲ ಒಂದು ದಿನದ ಕಾರ್ಯಕ್ರಮವಾಗದೇ ಇಂದಿನ ಯುವಜನತೆ ದೇಶಪ್ರೇಮವನ್ನು ಬೆಳೆಸಿಕೊಳ್ಳಲು ಮತ್ತು ದೇಶ ಸೇವೆ ಮಾಡಲು ಪ್ರೇರಣೆ ಆಗಬೇಕು ಎಂದು ಹೇಳಿದರು. ಸದಾಶಿವ ರಾಯರ ವಿಜಯ ದಿವಸದ ಸ್ಮರಣೆಗಾಗಿ ಪ್ರತಿ ವರ್ಷ ಫೆಬ್ರುವರಿ26 ರಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿ ಸೇರಿ ವಿಜಯೋತ್ಸವ ಕಾರ್ಯಕ್ರಮ ಆಚರಿಸುವಂತೆ ಆಗಬೇಕು ಎಂದು ತಿಳಿಸಿದರು.

ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ಜಿ.ಜಿ ಹೆಗಡೆ, ಸದಾಶಿವ್ ರಾಯರು ಈ ನಾಡು ಕಂಡ ಮಹಾಪುರುಷ ಮಹಾನ ವ್ಯಕ್ತಿ ಕರ್ನಾಟಕ ಕಾಶ್ಮೀರ ಎಂದು ಗುರುತಿಸಿಕೊಂಡಿರುವ ನಮ್ಮ ಕಾರವಾರದಲ್ಲಿ ಹೋರಾಟದ ಕಿಚ್ಚನ್ನು ಮತ್ತು ಅದರ ಜ್ಯೋತಿಯನ್ನು  ಬೆಳಗಿಸಿದ್ದಾರೆ. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಖಂಡಿಸಿ ಹೋರಾಟದ ಕಿಚ್ಚನ್ನು ಹಚ್ಚಿ ಪ್ರಪ್ರಥಮ ಬಾರಿಗೆ ಬ್ರಿಟಿಷರ ಧ್ವಜವನ್ನು ಇಳಿಸಿ ನಮ್ಮ ಹಿಂದೂ ಭಗವಧ್ವಜವನ್ನು ಹಾರಿಸಿದ್ದಾರೆ. ಸದಾಶಿವರಾಯರ ಸಾಹಸಗಾಥೆ ಚಿರಕಾಲ ಅವಿಸ್ಮರಣೀಯ ಎಂದು ಹೇಳಿದ್ರು..

ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ ಮಾತನಾಡಿ, ಸದಾಶಿವ್ ರಾಯರಂತ ಮಹಾಪುರುಷರನ್ನು ನಾವು ಪದೇ ಪದೇ ನೆನಪಿಸಿಕೊಳ್ಳುತ್ತಿರಬೇಕು. ಅವರ ಜೀವನ ಚರಿತ್ರೆಯನ್ನು ಓದಿ ತಿಳಿದುಕೊಳ್ಳಬೇಕು. ಸನಾತನ ಸಂಸ್ಕೃತಿಯ ಬಗ್ಗೆ ಇನ್ನಷ್ಟು ಹೆಚ್ಚು ಪ್ರಚಾರ ಮಾಡುತ್ತಿರಬೇಕು. ಇಂಥ ಮಹಾಪುರುಷರ ಕಾರ್ಯಕ್ರಮ ಮಾಡುತ್ತಿರುವದರಿಂದ ನಮ್ಮ ಮುಂದಿನ ಪೀಳಿಗೆಗೆ ಧಾರೆಯೆರೆದು ಕೊಡಬೇಕು ಎಂದು ಹೇಳಿದ್ರು..

ಇದೇ ವೇಳೆ ದಿಕ್ಸೂಚಿ ಭಾಷಣಗಾರ ಜಿ.ಜಿ ಹೆಗಡೆ ಹಾಗೂ ಎನ್.ಎಸ್ ಹೆಗಡೆಯವರಿಗೆ ಸನ್ಮಾನಿಸಿ ಗೌರವಿಸಲಾಯ್ತು. ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ಥಳೀಯ ಸಾಧಕರಿಗೆ ಸನ್ಮಾನಿಸಿ  ಗೌರವಿಸಲಾಯ್ತು. ಈ ವೇಳೆ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಗಜಾನನ್ ಗುನಗ, ಸಂಜಯ್ ಸಾಳುಂಕೆ, ನಗರಾಧ್ಯಕ್ಷ ನಾಗೇಶ್ ಕುರುಡೇಕರ್, ಅಂಕೋಲಾ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಭೂ ದಾನಿಗಳಾದ ಸುಧಾಕರ್ ನಾಯ್ಕ್, ಮೀನುಗಾರ ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ್ ಬಾಂದೇಕರ್,  ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಜಾತ ಬಾಂದೇಕರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶುಭಂ ಕಳಸ್, ನಗರಸಭೆ ಮಾಜಿ ಉಪಾಧ್ಯಕ್ಷರು ಪಿ ಪಿ ನಾಯ್ಕ್, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ರು..