ದಾಂಡೇಲಿಯಲ್ಲಿ 6.5 ಸಾವಿರ ಮನೆಗಳಿಗೆ ಅಯೋಧ್ಯೆ ಶ್ರೀರಾಮ‌ ಮಂದಿರದ ಅಕ್ಷತೆ ವಿತರಣೆ

ದಾಂಡೇಲಿ : ನಗರದ ಒಟ್ಟು 10 ವಸತಿಯ 31 ಉಪ ವಸತಿಗಳಲ್ಲಿ 6.5 ಸಾವಿರ ಮನೆಗಳಿಗೆ ಮತ್ತು ನಗರದ 48 ದೇವಸ್ಥಾನಗಳಿಗೆ ತೆರಳಿ ಪ್ರಭು ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನ ಪತ್ರಿಕೆ ಹಾಗೂ ಅಕ್ಷತೆ ತಲುಪಿಸಲಾಗಿದೆ ಎಂದು ಅಭಿಯಾನ ಪ್ರಮುಖರಾದ ಸುಧಾಕರ ರೆಡ್ಡಿ ತಿಳಿಸಿದರು.

ಶನಿವಾರ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ಅವರು ನಗರದಲ್ಲಿ 280 ಸ್ವಯಂ ಸೇವಕರು ಮತ್ತು 42ಕ್ಕೂ ಅಧಿಕ ಮಾತೆಯರು ಅಕ್ಷತೆ ವಿತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಜ. 22 ರಂದು ಶ್ರೀರಾಮನ ಪ್ರತಿಷ್ಠಾಪನೆಯ ಸಂಧರ್ಭದಲ್ಲಿ ನಗರದ ಎಲ್ಲಾ ದೇವಸ್ಥಾನಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ವಿಶೇಷ ಪೂಜೆಗಳು ನೆರವೇರಿಸಲು ದೇವಸ್ಥಾನದ ಆಡಳಿತ ಮಂಡಳಿಯವರು ಅತಿ ಉತ್ಸಾಹದಿಂದ ತಯಾರಿ ನಡೆಸಿರುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಅಂದು ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಯಾವುದೇ ಮೆರವಣಿಗೆ ಇರುವುದಿಲ್ಲ ಎಂದು ತಿಳಿಸಿದರು.