ರೋಹಿಣಿ ಹೆಗಡೆಗೆ ಮಾಸ್ಕೇರಿ ಅವ್ವನ ಪ್ರಾಮಾಣಿಕ ಕಾವ್ಯ ಪ್ರಶಸ್ತಿ

ದಾಂಡೇಲಿ : ಶಿರಸಿಯ ಕವಯಿತ್ರಿ, ಯಕ್ಷಗಾನ ಅರ್ಥಧಾರಿ, ರೋಹಿಣಿ ಹೆಗಡೆಯವರಿಗೆ ನಗರದ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆ ಮತ್ತು ಶಿರಸಿಯ ಸಾಹಿತ್ಯ ಸಂಚಲನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ “ಜಾನಪದ ಕವಯಿತ್ರಿ ಮಾಸ್ಕೇರಿ ಅವ್ವನ ಸಂಸ್ಮರಣಾರ್ಥ ವರ್ಷಂಪ್ರತಿ ನೀಡುತ್ತಿರುವ ಪ್ರಾಮಾಣಿಕ ಕಾವ್ಯ ಪ್ರಶಸ್ತಿ-2024” ಘೋಷಿಸಲಾಗಿದೆ.

ಜನವರಿ : 20 ರಂದು ಶನಿವಾರ ಬೆಳಿಗ್ಗೆ 11 ಘಂಟೆಗೆ ನಗರದ ಜೆ.ಎನ್.ರಸ್ತೆಯಲ್ಲಿರುವ ಶ್ರೀಗುರು ನಿಲಯದಲ್ಲಿ‌ ಜರುಗಲಿರುವ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಈ ಕಾರ್ಯಕ್ರಮವನ್ನು ನಗರಸಭೆಯ ಆಯುಕ್ತರಾದ ರಾಜಾರಾಮ ಪವಾರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಯಕ್ಷಗಾನ ವಿದ್ವಾಂಸರಾದ
ಡಾ.ಜಿ.ಎ. ಹೆಗಡೆ ಸೋಂದಾ ಆಗಮಿಸಲಿದ್ದಾರೆ. ಶಿರಸಿಯ ಕೃಷ್ಣ ದತ್ತಾತ್ರೇಯ ಪದಕಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ನಗರದ ಬಿಎಡ್ ಕಾಲೇಜು ಪ್ರಾಚಾರ್ಯರಾದ ಸಹನಾ ಸೂರ್ಯವಂಶಿ, ಸಮಾಜ ಸೇವಕರಾದ ರಾಜು ಉಗ್ರಾಣಕರ, ಸಾಹಿತಿ ರವಿ ಲಕ್ಷ್ಮೇಶ್ವರ, ಸಾಹಿತ್ಯ ಪೋಷಕರಾದ ರೋಷನ್ ನೇತ್ರಾವಳಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕಿ ಭಾರತಿ ಕವರಿ, ಕೃಷ್ಣ ಪದಕಿ ಐಶ್ವರ್ಯ ಗುರುರಾಜ ಹಾಗೂ ಸಂಸ್ಥಾಪಕರಾದ ಮಾಸ್ಕೇರಿ ನಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.