ಹಳೆದಾಂಡೇಲಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಸ್ಥಳೀಯರಿಂದ ಆಗ್ರಹ : ಸ್ಥಳಕ್ಕೆ ತಹಶೀಲ್ದಾರ್ ಮತ್ತು ಪೌರಾಯುಕ್ತರ ಭೇಟಿ

ದಾಂಡೇಲಿ : ಗ್ರಾಮೀಣ ನೀರು ಸರಬರಾಜು ಇಲಾಖೆಯ ಆಶ್ರಯದಡಿ ನಗರದ ಹಳೆ ದಾಂಡೇಲಿಯಿಂದ ಕುಡಿಯುವ ನೀರು ಪೈಪ್ ಲೈನ್ ಅಳವಡಿಕೆ ಕಾಮಗಾರಿಗಾಗಿ ರಸ್ತೆ‌ ಬದಿ ಅಗೆದು ಪೈಪ್ ಲೈನ್ ಅಳವಡಿಸಿದ್ದ ಕಾರಣ ರಸ್ತೆ ತೀವ್ರ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆ ದುರಸ್ತಿಗಾಗಿ ಹಾಗೂ ಡಾಂಬರೀಕರಣಕ್ಕಾಗಿ ಸ್ಥಳೀಯರು ಸಾಕಷ್ಟು ಬಾರಿ ನಗರ ಸಭೆಗೆ ಹಾಗೂ ಸಂಬಂಧಪಟ್ಟವರಿಗೆ ಮನವಿಯನ್ನು ಮಾಡಿದ್ದರು. ಆದರೆ ಪೈಪ್ ಲೈನ್ ಕಾಮಗಾರಿ ಮುಗಿದಿದ್ದರೂ, ರಸ್ತೆ ದುರಸ್ತಿ ಮಾಡದೇ ಇರುವುದರಿಂದ ಸ್ಥಳೀಯರು ಹಳೆ ದಾಂಡೇಲಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಕಳೆದ ಎರಡು, ಎರಡುವರೆ ವರ್ಷಗಳಿಂದ ಯುಜಿಡಿ ಹಾಗೂ ನೀರು ಸರಬರಾಜಿಗೆ ಸಂಬಂಧಪಟ್ಟಂತೆ ಪೈಪ್ ಲೈನ್ ಕಾಮಗಾರಿ ಸಲುವಾಗಿ ರಸ್ತೆಯನ್ನು ಅಗೆದಿರುವುದರಿಂದ ರಸ್ತೆ ತೀವ್ರ ಹದಗೆಟ್ಟು, ಅಲ್ಲಲ್ಲಿ ಹೊಂಡ – ಗುಂಡಿಗಳು ನಿರ್ಮಾಣವಾಗಿ, ಡಾಂಬರ್ ಸಂಪೂರ್ಣ ಕಿತ್ತು ಹೋಗಿ, ರಸ್ತೆಯಲ್ಲಿ ಪ್ರಯಾಣ ಮಾಡಲು ಹರಸಾಹಸ ಪಡಬೇಕಾದ ಸ್ಥಿತಿ ನಿತ್ಯದ ಭವಣೆಯಾಗಿದೆ. ಇದರ ಜೊತೆಯಲ್ಲಿ ಈ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಸಂಚರಿಸುವುದರಿಂದ ರಸ್ತೆಯೆಲ್ಲಾ ಧೂಳು ತುಂಬಿಕೊಂಡು, ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ.

ಹೋದ ನವೆಂಬರ್ 30ರ ರೊಳಗಡೆ ರಸ್ತೆ ದುರಸ್ತಿ ಮಾಡಿಕೊಡುವ ಭರವಸೆಯನ್ನು ನೀಡಲಾಗಿತ್ತು. ಆದರೆ ಭರವಸೆ ಭರವಸೆಯಾಗಿಯೇ ಉಳಿದ ಕಾರಣ, ಹಳೆ ದಾಂಡೇಲಿಯ ನಾಗರಿಕರು ರಸ್ತೆ ದುರಸ್ತಿ ಮತ್ತು ಡಾಂಬರೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ ಮತ್ತು ಪೌರಾಯುಕ್ತರಾದ ಆರ್.ಎಸ್ ಪವಾರ್ ಅವರು ಪ್ರತಿಭಟನಕಾರರ ಜೊತೆ ಮಾತುಕತೆಯನ್ನು ನಡೆಸಿದರು. ರಸ್ತೆ ದುರಸ್ತಿ ಮತ್ತು ಡಾಂಬರೀಕರಣಕ್ಕೆ ಆಗ್ರಹಿಸಿದ ಪ್ರತಿಭಟನಾಕಾರರ ಆಗ್ರಹಕ್ಕೆ ಕೂಡಲೇ ಪೌರಾಯಕ್ತರಾದ ಆರ್ ಎಸ್ ಪವಾರ್ ಅವರು ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸತೀಶ್ ಅವರಿಗೆ ಮೊಬೈಲ್ ಕರೆ ಮಾಡಿ ಮಾತನಾಡಿ ಇದೇ ಜನವರಿ :08ರ ಸೋಮವಾರದಿಂದ ರಸ್ತೆ ದುರಸ್ತಿ ಮತ್ತು ಡಾಂಬರೀಕರಣ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚನೆಯನ್ನು ನೀಡಿದರು. ಪೌರಾಯುಕ್ತರ ಮಾತಿಗೆ ಒಪ್ಪಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸತೀಶ್ ಅವರು ಸೋಮವಾರದಿಂದ ರಸ್ತೆ ಕಾಮಗಾರಿ ಪ್ರಾರಂಭಿಸುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಸೋಮವಾರ ರಸ್ತೆ ಕಾಮಗಾರಿ ಪ್ರಾರಂಭ ಮಾಡದೇ ಇದ್ದಲ್ಲಿ ಪಕ್ಷದಲ್ಲಿ ರಸ್ತೆ ತಡೆ ಹಾಗೂ ನೀರು ಸರಬರಾಜಿಗೆ ಸಂಬಂಧಪಟ್ಟಂತೆ ಅಳವಡಿಸಿರುವ ಪೈಪ್’ಗಳನ್ನು ಒಡೆದು ಹಾಕುವ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್, ಸ್ಥಳೀಯ ಪ್ರಮುಖರುಗಳಾದ ವಿಷ್ಣು ಕಾಮತ್, ಮೀಲಿಂದ್ ಕೋಡ್ಕಣಿ, ರಾಜು ಕೋಡ್ಕಣಿ, ಅನ್ವರ್ ಪಠಾಣ್, ವಿನೋದ್ ಬಾಂದೇಕರ್, ಸರ್ಪರಾಜ್‌ ಮುಲ್ಲಾ, ಆರೀಪ್ ಖಾಜಿ, ತೌಫೀಕ್ ಸೈಯದ್, ಶಾಂತ್ ಮಹಾಲೆ, ಇಲಿಯಾಸ್ ಐನಾಪುರ, ಜಾನ್ ಡಿಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.