ಅಂಬಿಕಾನಗರದಲ್ಲಿ ಪೊಲೀಸ್ ಇಲಾಖೆಯ ಆಶ್ರಯದಡಿ ಮಾದಕ ದ್ರವ್ಯ ವಿರೋಧಿ ಜಾಥಾ

ದಾಂಡೇಲಿ : ಪೊಲೀಸ್ ಇಲಾಖೆಯ ಆಶ್ರಯದಡಿ ಕರ್ನಾಟಕ‌ ವಿದ್ಯುತ್ ನಿಗಮದ ಸಹಯೋಗದೊಂದಿಗೆ ಅಂಬಿಕಾನಗರದಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ‌ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಂಬಿಕಾನಗರ ಪೊಲೀಸ್ ಠಾಣೆಯಿಂದ ಆರಂಭಗೊಂಡ ಜಾಗೃತಿ ಜಾಥಾವು ಅಂಬಿಕಾನಗರದ ಪ್ರಮುಖ ರಸ್ತೆಗಳಲ್ಲಿ‌ ಮತ್ತು ಕೆಪಿಸಿ ವಸತಿ ಗೃಹಗಳಿರುವ ರಸ್ತೆಯಲ್ಲಿ ಸಂಚರಿಸಿತು.

ಪಿಎಸ್ಐ ಹುಸೇನಸಾಬ್.ಕೆ.ಚೆಪ್ಪರಕರ್ ಅವರು ಮಾತನಾಡುತ್ತಾ, ಮಾದಕ ವ್ಯಸನಗಳು ವ್ಯಕ್ತಿಯ ಜೊತೆಗೆ ಆತನ‌ ಕುಟುಂಬವನ್ನೆ ಸರ್ವನಾಶ‌ ಮಾಡುತ್ತದೆ. ನಮ್ಮ ಜೀವನ ಉತ್ತಮ‌‌ ನಡವಳಿಕೆಯಿಂದ ಕೂಡಿ ಸಮಾಜಮುಖಿಯಾಗಿ, ಸಂಸ್ಕಾರಯುತವಾಗಿ ಇರಬೇಕಾದರೇ ದುಶ್ಚಟಗಳಿಂದ ದೂರವಿರಬೇಕೆಂದು ಕರೆ ನೀಡಿದರು.

ತನಿಖಾ‌ ವಿಭಾಗದ ಪಿಎಸ್ಐ ಪಿ.ಬಿ.ಕೊಣ್ಣೂರು ಅವರು‌ ಮಾತನಾಡಿ ಬಹುತೇಕ ಅಪರಾಧ ಚಟುವಟಿಕೆಗಳಿಗೆ ದುಶ್ಚಟಗಳೆ ಕಾರಣವಾಗಿದೆ. ಸುಸಂಸ್ಕೃತ ನಡವಳಿಕೆಗಳನ್ನು‌‌‌ ಮೈಗೂಡಿಸಿಕೊಂಡಲ್ಲಿ ದುಶ್ಚಟಗಳಿಂದ ದೂರ ಉಳಿಯಲು ಸಾಧ್ಯ ಎಂದರು.

ಅಂಬಿಕಾನಗರದ ಕೆಪಿಸಿಯ ಮುಖ್ಯ ಅಭಿಯಂತರರಾದ
ರವಿಚಂದ್ರನ್ ಶಿರಾಲಿ ಅವರು ಮಾತನಾಡಿ ನಮ್ಮಲ್ಲಿ‌ ಸದ್ಚಿಚಾರ, ಸದ್ ಚಿಂತನೆಗಳು ಸದಾ ಇರಬೇಕು. ಮಾದಕ ವ್ಯಸನಗಳಿಗೆ ಬಲಿಯಾಗಿ ಅನೇಕ ಸಾವು ನೋವುಗಳು ಸಂಭವಿಸುವುದನ್ನು ಕಾಣುತ್ತಿದ್ದೇವೆ‌ ಎಂದರು.

ಕೆಪಿಸಿಯ ಭದ್ರತಾ ವಿಭಾಗದ ಅಧಿಕಾರಿ ಎ.ಎಸ್.ನಾಯ್ಕ ಅವರು ಸುಂದರ ಜೀವನ ಸಮೃದ್ಧ ಸಮಾಜ‌ ನಿರ್ಮಾಣಕ್ಕೆ ಸಹಕಾರಿಯಾಗಬೇಕೆ ವಿನಃ ದುಶ್ಚಟಗಳಿಗೆ ದಾಸರಾಗಿ ಸಮಾಜಕ್ಕೆ‌‌ ಮಾರಕವಾಗಬಾರದು ಎಂದು‌ ಕರೆ‌ ನೀಡಿದರು.

ಜಾಥಾದಲ್ಲಿ ಪೊಲೀಸ್ ಸಿಬ್ಬಂದಿಗಳು, ಕೆಪಿಸಿಯ ಭದ್ರತಾ ಸಿಬ್ಬಂದಿಗಳು, ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.