ಸಮಾಜದ ಪ್ರಗತಿಗೆ ನಿರಂತರ ಶ್ರಮಿಸಿ: ಹಿರಿಯ ಧುರೀಣ ಪಿ. ಎಂ. ತಾಂಡೇಲ್

ಕಾರವಾರ: ಯಾವುದೇ ಸಮಾಜವು ಪ್ರಗತಿ ಹೊಂದಲು ಸಾಂಘಿಕ ಪ್ರಯತ್ನ ಅಗತ್ಯವಾಗಿದೆ. ಈ ದಿಶೆಯಲ್ಲಿ ಹಲವು ದಶಕಗಳಿಂದ ಹರಿಕಂತ್ರ ಸಮಾಜದ ಸಂಘಟನೆಗಾಗಿ ಸಾಮರಸ್ಯದಿಂದ ದುಡಿದಿದ್ದೇನೆ. ಮುಂದಿನ ದಿನಗಳಲ್ಲಿ ಯುವ ಜನತೆ ಇದರ ಹೊಣೆ ಹೊರಬೇಕಾಗಿದೆ ಎಂದು ಹರಿಕಂತ್ರ ಸಮಾಜದ ಹಿರಿಯ ಧುರೀಣ ಪಿ. ಎಂ. ತಾಂಡೇಲ್ ಹೇಳಿದರು.

ನಗರದ ಸಾಗರ ದರ್ಶನ ಸಭಾಭವನದಲ್ಲಿ ಶನಿವಾರ ಜರುಗಿದ ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಹರಿಕಂತ್ರ ಸಮಾಜದ ಸ್ವಂತ ಕಟ್ಟಡ ಮತ್ತು ಸಭಾಭವನ ನಿರ್ಮಾಣದ ಕನಸು ಇಂದಿಗೂ ನನಸಾಗಿಲ್ಲ. ಅದು ನನ್ನ ವೈಯಕ್ತಿಕ ಅಭಿಲಾಷೆಯು ಹೌದೂ. ಅದಕ್ಕಾಗಿ ಬೇಡಿಕೆ ಸಲ್ಲಿಸಲು ಈಗಲೂ ಸಿದ್ಧನಿದ್ದೇನೆ. ಪ್ರಗತಿ ಸಾಧಿಸಲು ಬಲಿಷ್ಠ ಸಂಘಟನೆ ರೂಪಗೊಂಡು ಯುವಕರು ಸಮಾನಮನಸ್ಕಾರಾಗಿ ದುಡಿಯಬೇಕು. ನೂತನವಾಗಿ ಅಸ್ತಿತ್ವಕ್ಕೆ ಬಂದ ಸಂಘಟನೆ ಹಿರಿಯರನ್ನು ಗೌರವಿಸುತ್ತಿರುವುದು ಶ್ಲಾಘನೀಯ. ಹಾಗೆಯೇ ಸಮಾಜದ ಪ್ರಗತಿಗಾಗಿಯೂ ನಿರಂತರ ಶ್ರಮಿಸಿ, ಉತ್ತಮ ಕಾರ್ಯಗಳ ಮೂಲಕ ಯಶಸ್ವಿಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ದಿಲೀಪ್ ಅರ್ಗೇಕರ್, ಸಮುದಾಯದ ಬೆನ್ನೆಲುಬಾಗಿ ಸಂಘ ಕಾರ್ಯ ನಿರ್ವಹಿಸಲಿದೆ. ಸಮಾನಮನಸ್ಕ ಯುವಕರು ಸಂಘಟನೆಯಲ್ಲಿ ತೊಡಗಲಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಸೈನಿಕ ಶ್ರೀಧರ ಚೌಗಲೆ, ಸಮುದಾಯದ ಕಾರ್ಯಾ ಚಟುವಟಿಕೆಗಳು ವಿಸ್ತಾರವಾದಷ್ಟು ನಮ್ಮೊಳಗಿನ ಹುಮ್ಮಸ್ಸು ಹೆಚ್ಚುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಕರ ಹರಿಕಂತ್ರ, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪ್ರೋತ್ಸಾಹ ಹಮ್ಮಿಕೊಂಡಿದ್ದು ಸಮಯೋಚಿತ ಮತ್ತು ಅವಶ್ಯಕ ನಿರ್ಧಾರವಾಗಿದೆ. ಹಸಿವು ನೀಗಿಸುವ ಕಾರ್ಯವು ಉಪಚಾರಕ್ಕಿಂತ ಲೇಸು ಎಂದರು.
ಹಿರಿಯ ಪತ್ರಕರ್ತ ವಿದ್ಯಾಧರ ಮೊರಬಾ, ಮಹಿಳಾ ಮುಖಂಡರಾದ ರಾಜೇಶ್ವರಿ ಕೇಣಿಕರ, ಮೀನುಗಾರ ಮುಖಂಡ ಹರಿಹರ ಹರಿಕಂತ್ರ, ತದಡಿ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ಉಮಾಕಾಂತ ಹೊಸ್ಕಟ್ಟಾ ಮಾತನಾಡಿ ಶುಭ ಕೋರಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಹರಿಕಂತ್ರ, ನೂತನ ಸಂಘದ ಪರಿಕಲ್ಪನೆ, ರಚನೆ ಮತ್ತು ಉದ್ದೇಶಗಳ ಕುರಿತು ವಿವರಿಸಿದರು.
ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರೋತ್ಸಾಹ ನಡೆಯಿತು. ಹಿರಿಯ ಧುರೀಣ ಪಿ. ಎಂ. ತಾಂಡೇಲ್, ಹೋರಾಟಗಾರ ಉಮಾಕಾಂತ ಹೊಸ್ಕಟ್ಟಾ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹರಿಹರ ಹರಿಕಂತ್ರ, ಉದ್ಯಮಿ ನಾಗಪ್ಪ ಹರಿಕಂತ್ರ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕಾರವಾರದ ಮೂಡಲಮಕ್ಕಿ ಶಾಲೆಯ ಮುಖ್ಯ ಶಿಕ್ಷಕ ಶಂಕರ ಹರಿಕಂತ್ರ ಮತ್ತು ಮೀನುಗಾರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಶೀಲಾ ಹರಿಕಂತ್ರ ಅವರನ್ನು ಸನ್ಮಾನಿಸಲಾಯಿತು.

ಕಾರವಾರ ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಸಂಘಟನೆ ಯಶಸ್ವಿಯಾಗಿ ಮುಂದುವರೆಯಲಿ ಎಂದು ದೂರವಾಣಿಯ ಮೂಲಕ ಶುಭ ಕೋರಿದರು. ಉದ್ಯಮಿ ಆನಂದ ಹರಿಕಂತ್ರ, ಪತ್ರಕರ್ತ ಕೆ ರಮೇಶ್, ಸಂಘದ ಮಿಥುನ್ ತಾಂಡೇಲ್, ಸಂಜು ಖಾರ್ವಿ ವೇದಿಕೆಯಲ್ಲಿದ್ದರು.
ಬಿ ಎಲ್ ಸೃಜನ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಜಿಲ್ಲಾಧ್ಯಕ್ಷ ರೋಷನ್ ಹರಿಕಂತ್ರ ಸ್ವಾಗತಿಸಿದರು. ಅಂಕೋಲಾ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮಹೇಶ ಹರಿಕಂತ್ರ, ಕಾರವಾರ ತಾಲೂಕು ನೌಕರರ ಘಟಕದ ಅಧ್ಯಕ್ಷರಾಗಿ ಶ್ರೀಧರ ಚೌಗಲೆ ಆಯ್ಕೆಯಾದರು. ಸಾಯಿನಾಥ್ ದುರ್ಗೇಕರ್, ಸಂಘದ ಪ್ರಮುಖರಾದ ನವೀನ್ ಅರ್ಗೆಕರ್, ಭರತ್ ಖಾರ್ವಿ, ಸುನೀಲ್ ತಾಂಡೇಲ್, ಪ್ರವೀಣ್ ತಾಂಡೇಲ್, ರಾಹುಲ್ ತಾಂಡೇಲ್, ನಂದೀಶ್ ಮಾಜಲಿಕರ್, ರವಿ ಹೊಸ್ಕಟ್ಟ, ವಿನಾಯಕ್ ಖಾರ್ವಿ, ವಿಠೋಬಾ ತಾಂಡೇಲ್, ನೌಕರರ ಘಟಕದ ದೀಪಕ್ ತಾಂಡೇಲ್, ರೋಷನ್ ತಾಂಡೇಲ್, ಸಚಿನ್ ಹರಿಕಂತ್ರ, ನಾಗರಾಜ್ ಉಳ್ವೇಕರ, ರಾಜೇಶ್ ತಾಂಡೇಲ್, ಶೈಲೂ ಮಾಜಲಿಕರ್, ಉಮಾಕಾಂತ ಕುಮಾರಸ, ಮೋಹನ್ ಉಳ್ವೇಕರ, ಪ್ರದೀಪ್ ತಾಂಡೇಲ್, ದಿಲೀಪ್ ಉಳ್ವೇಕರ ಇದ್ದರು.