ಉತ್ತರ ಕನ್ನಡ: ಆಟವಾಡುತ್ತಾ ನೀರಿಗೆ ಬಿದ್ದು ಮೂರು ವರ್ಷದ ಮಗು ಸಾವು

ಉತ್ತರ ಕನ್ನಡ, ಡಿ.23: ಆಟವಾಡುತ್ತಾ ಇಟ್ಟಿಗೆ ತಯಾರಿಕೆಗೆ ಶೇಖರಿಸಿಟ್ಟಿದ್ದ ನೀರಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ನಡೆದಿದೆ. ಇಂದೂರಿನ ಮಾನ್ವಿತ ಮಲ್ಲಿಕಾರ್ಜುನ ಹೊಸೂರ(3) ಮೃತ ಮಗು, ಇನ್ನು ಮಗುವಿನ ತಾಯಿ ಮಾನ್ವಿತಳನ್ನು ತನ್ನ ಜೊತೆಗೆ ಇಟ್ಟಿಗೆ ಕೆಲಸಕ್ಕೆ ಕರೆತಂದಿದ್ದಳು. ತಾಯಿ ತನ್ನ ಕೆಲಸದಲ್ಲಿ ನಿರತಳಾಗಿದ್ದಾಗ ಮಗು ಮಾನ್ವಿತ ನೀರಿಗೆ ಬಿದ್ದು ಕೊನೆಯುಸಿರೆಳೆದಿದೆ.

ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವು

ಇನ್ನು ಮಗು ಬಿದ್ದಿದ್ದನ್ನು ನೋಡಿದ ತಾಯಿ ಕೂಡಲೇ ಮುಂಡಗೋಡ ತಾಲೂಕು ಆಸ್ಪತ್ರೆಗೆ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ, ತಾಲೂಕು ಆಸ್ಪತ್ರೆ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಈ ಹಿನ್ನಲೆ ಬಳಿಕ ಆಸ್ಪತ್ರೆ ಸಿಬ್ಬಂದಿಗಳು ಮಗುವನ್ನು ಹುಬ್ಬಳ್ಳಿ ಕಿಮ್ಸ್​​​ಗೆ ಕಳುಹಿಸಿ ಕೊಟ್ಟಿದ್ದಾರೆ​​​. ಆದರೆ, ಹುಬ್ಬಳ್ಳಿ ಕಿಮ್ಸ್​​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.