ದಾಂಡೇಲಿ ನಗರದ ಹಳೆ ನಗರ ಸಭೆಯ ಆವರಣದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ

ದಾಂಡೇಲಿ : ನಗರದ ಹಳೆ ನಗರಸಭೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಮಾನವ ಜನಪರ ಮಿಷನ್ ಆಶ್ರಯದಡಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಾನವನ ಬೆಳವಣಿಗೆ ಎಂಬ ಚಿಂತನ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ಆರ್ ವಿ ದೇಶಪಾಂಡೆ ಅವರು ಸ್ವತಂತ್ರವಾಗಿ ಬದುಕುವ ಮನುಷ್ಯನೋರ್ವನ ಹಕ್ಕನ್ನು ಗೌರವಿಸುವ ಹಾಗೂ ಈ ಭೂಮಿಯ ಮೇಲೆ ಬದುಕುತ್ತಿರುವ ಕೋಟಿ ಕೋಟಿ ಜನರಿಗೆ ಸಮಾನ ಹಕ್ಕುಗಳಿವೆ ಎಂದು ಸಾರುವ ದಿನವವಾದ ಇಂದು ಮಾನವ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಅದರಂತೆ ಇಂದು ವಿಶ್ವದಾದ್ಯಂತ ಮಾನವ ಹಕ್ಕುಗಳ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಪ್ರಜಾಪ್ರಭುತ್ವದ ಜೀವಂತಿಕೆ ಇರುವುದೇ ನಾಗರಿಕ ಸಮಾಜದ ಸ್ವತಂತ್ರ ಬದುಕಿನಿಂದ. ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ, ಬಾಳಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕರಾದ ಹಾಜಿ ಫಿರೋಜ್ ಪಿರ್ಜಾದೆ ಅವರು ಮಾನವ ಹಕ್ಕುಗಳ ರಕ್ಷಣೆಯ ನೆಟ್ಟಿನಲ್ಲಿ ಹಾಗೂ ಈ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘಟನೆ ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಸಂಘದ ನಿರ್ವಹಣೆಗೆ ಹಳೆ ನಗರಸಭೆಯ ಕಟ್ಟಡದಲ್ಲಿ ಕೊಠಡಿಯನ್ನು ಒದಗಿಸಿಕೊಟ್ಟ ಆರ್ ವಿ ದೇಶಪಾಂಡೆಯವರು ಹಾಗೂ ನಗರಸಭೆಯ ಸರ್ವ ಸದಸ್ಯರಿಗೆ ಮತ್ತು ನಗರ ಸಭೆಯ ಅಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಹಾಗೂ ತಾಲೂಕಿಗೆ ಸಂಬಂಧಪಟ್ಟಂತೆ ವಿವಿಧ ಕಚೇರಿಗಳನ್ನು ಮಂಜೂರು ಮಾಡುವಂತೆ ವಿನಂತಿಸಿ ಆರ್ ವಿ ದೇಶಪಾಂಡೆ ಅವರಿಗೆ ಮನವಿಯನ್ನು ಮಾಡಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ್, ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ತಾಲ್ಲೂಕು ಪಂಚಾಯ್ತು ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಹಾಲಮನ್ನವರ್, ಕರ್ನಾಟಕ ಸಂಘದ ಅಧ್ಯಕ್ಷರಾದ ಯು.ಎಸ್. ಪಾಟೀಲ್, ಬೆಳಗಾವಿಯ ನ್ಯಾಯವಾದಿಗಳಾದ ಡಾ.ರವೀಂದ್ರ ತೋಟಿಗೇರ, ಸಂಘಟನೆಯ ರಾಜ್ಯ ಮುಖಂಡರುಗಳಾದ ಡಾ.ಪ್ರಕಾಶ್ ಐಹೋಳ್ಳಿ, ಅಲ್ಬರ್ ಖೋಜಾ, ಮಂಜುಳಾ ದೇವಿ ಮೊದಲಾದವರು ಉಪಸ್ಥಿತರಿದ್ದರು.

ಹಾಜಿ ಫಿರೋಜ್ ಪಿರ್ಜಾದೆ ಅವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ಸಂಘಟನೆಯ ಸಹಾಯಕ ನಿರ್ದೇಶಕರಾದ ರವಿ ಸುತಾರ್ ವಂದಿಸಿದರು. ಸಂಘಟನೆಯ ಉಪಾಧ್ಯಕ್ಷರಾದ ಆರ್ ವಿ ಗಡಪ್ಪನವರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘಟನೆಯ ಜಿಲ್ಲಾ ನಿರ್ದೇಶಕರಾದ ಅವಿನಾಶ್ ಘೋಡ್ಕೆ, ಸರ್ವ ಧರ್ಮಗಳ ಮಹಿಳಾ ಸಂಘಟನೆಯ ಅಧ್ಯಕ್ಷ ಕರ್ಣಮ್ಮ ತೊಡಟ್ಟಿ ಹಾಗೂ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.