ಮೂರು ಕೃತಿ ಲೋಕಾರ್ಪಣೆ/ ಡಾ. ರಾಮಕೃಷ್ಣ ಗುಂದಿ ಕಳಕಳಿಓದುವ – ಬರೆಯುವ ಸಂಸ್ಕೃತಿ ಮರೆಯಾಗದಿರಲಿ


ಅಂಕೋಲಾ:ಇಂದು ಯುವಜನರು ಪುಸ್ತಕಗಳನ್ನು ಓದುವುದರಿಂದ ದೂರವಾಗುತ್ತಿದ್ದು ಯುವಜನರಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಕೆಲಸಗಳು ನಡೆಯಬೇಕಿದೆ ಎಂದು ಹಿರಿಯ ಕತೆಗಾರ ಡಾ.ರಾಮಕೃಷ್ಣ ಗುಂದಿ ಹೇಳಿದರು.
ಕರ್ನಾಟಕ ಸಂಘ ಅಂಕೋಲಾ ಇವರ ಆಶ್ರಯದಲ್ಲಿ ಲೇಖಕಿ, ಕವಯತ್ರಿ ಶ್ರೀದೇವಿ ಕೆರೆಮನೆಯವರ ಕವನ ಸಂಕಲನ ನಗುವಿಗೊಂದು ಧನ್ಯವಾದ,ಅಂಕಣ ಬರಹ ಕಾಡುವ ಗರ್ಭ, ಪುಸ್ತಕಾವಲೋಕನ ಅಂಗೈಯೊಳಗಿನ ಬೆಳಕು ಕೃತಿಗಳನ್ನು ಗುರುವಾರ ಕನ್ನಡ ಭವನದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇಂದು ಕನ್ನಡ ಸಾರಸ್ವತ ಲೋಕದಲ್ಲಿ ಬರಯುವವರದ್ದೇ ದೊಡ್ಡ ಸಮೂಹ ಇದ್ದರೂ ಇದು ಅವರಿಗಷ್ಟೇ ಸೀಮಿತವಾಗದಂತೆ ಎಚ್ಚರ ವಹಿಸಬೇಕಿದೆ.
ಯುವ ಪೀಳಿಗೆಯಲ್ಲಿ ಓದುವ ಸಂಸ್ಕೃತಿ ಹಾಗೂ ಬರೆಯುವ ತುಡಿತ ಮರೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಈಗಿನ ಬರಹಗಾರರ ಮೇಲಿದೆ.ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಇದು ಅತ್ಯಗತ್ಯ ಎಂದರು.ಶ್ರೀದೇವಿ ಕೆರೆಮನೆಯವರ ಕೃತಿಗಳಲ್ಲಿ ಸಾಮಾಜಿಕ ಸಮಾನತೆಯ ನಿಲುವುಗಳನ್ನು ಕಾಣಬಹುದು. ಸಮಾನತೆಯ , ನ್ಯಾಯಪರ ನಿಲುವನ್ನು ಕಾಣಬಹುದಾಗಿದೆ. ಈ ತಲೆಮಾರಿನ ಬರಹಗಾರರಲ್ಲಿ ಇವರು ಬರವಣಿಗೆಯ ಶೈಲಿಯಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶ ಸಾಧಿಸಿದ್ದಾರೆ ಎಂದರು .
ಕೃತಿಗಳನ್ನು ಪರಿಚಯಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ. ಶ್ರೀಧರ ನಾಯಕ ಮಾತನಾಡಿ ಅಂಕೋಲೆಯ ಅನನ್ಯತೆ ಸಾರುವ ಪ್ರಯತ್ನಗಳು, ಓದುಗರ ಅಭಿರುಚಿ ಹೆಚ್ಚಿಸುವ ಪ್ರಯತ್ನ ಶ್ರೀದೇವಿ ಕೆರೆಮನೆ ತಮ್ಮ ಪುಸ್ತಕಗಳಲ್ಲಿ ತೋರಿದ್ದಾರೆ ಎಂದರು.
ಲೇಖಕಿ ಶ್ರೀದೇವಿ ಕೆರೆಮನೆ ಮಾತನಾಡಿ ಕರ್ನಾಟಕ ಸಂಘದಿಂದ ಪುಸ್ತಕಗಳ ಬಿಡುಗಡೆ ನಡೆದಿರುವುದು ಹೆಮ್ಮೆಯ ಸಂಗತಿ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ್ ಮಾತನಾಡಿ ಸಾಹಿತ್ಯ ಕ್ಷೇತ್ರಕ್ಕೆ ಅಂಕೋಲಾ ತಾಲೂಕಿನ ಕೊಡುಗೆ ಅಪಾರ,
ಬರವಣಿಗೆ ಮಾನಸಿಕ ನೆಮ್ಮದಿ ನೀಡುವ ಅದ್ಭುತ ಕಲೆಯಾಗಿದ್ದು ವಿದ್ಯಾರ್ಥಿಗಳು ಬರವಣಿಗೆಯಲ್ಲಿ ಆಸಕ್ತಿ ತೋರಬೇಕು ಎಂದರು.
ಕರ್ನಾಟಕ ಸಂಘದ ಗೌರವಾಧ್ಯಕ್ಷ ಪ್ರೊ.ಕೆ.ವಿ.ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಕೋಲೆಯ ಸಾಹಿತಿಗಳು ಸಾರಸ್ವತ ಲೋಕಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಲೇಖಕಿ ಶ್ರೀದೇವಿಯವರು ಈ ಮೂರೂ ಕೃತಿಗಳಲ್ಲಿ ತಮ್ಮ ಸತ್ವಯುತ ಬರವಣಿಗೆಯನ್ನು ಪರಿಚಯಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿ ನೆಲೆ ಊರುವ ಸಂಕೇತ ನೀಡಿದ್ದಾರೆ ಎಂದರು.
ಕರ್ನಾಟಕ ಸಂಘದ ಕಾರ್ಯದರ್ಶಿ ಮಹೇಶ ನಾಯಕ ಹಿಚ್ಕಡ ಸ್ವಾಗತಿಸಿದರು. ಶಿಕ್ಷಕ ರಾಜೇಶ ನಾಯಕ ಸೂರ್ವೆ ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ಎಸ್. ಆರ್. ನಾಯಕ ವಂದಿಸಿದರು.