ಕಾಡು ಹಂದಿಯನ್ನು ಬೇಟೆಯಾಡಿದ ಓರ್ವನ ಬಂಧನ, ಇನ್ನೋರ್ವ ಪರಾರಿ.


ಅಂಕೋಲಾ : ಕಾಡು ಹಂದಿಯನ್ನು ಬೇಟೆಯಾಡಿ ಕೆಲ ಭಾಗಗಳನ್ನು ಹುಗಿದಿಟ್ಟ ಆರೋಪದಲ್ಲಿ ಓರ್ವನನ್ನು ಅರಣ್ಯ ಇಲಾಖೆಯವರು ದಸ್ತಗಿರಿ ಮಾಡಿದ ಘಟನೆ ತಾಲೂಕಿನ ಹೆಬ್ಬೂಳದಲ್ಲಿ ನಡೆದಿದೆ. ರಾಜೇಶ ಚಂದ್ರು ಪಡ್ತಿ (29) ಬಂಧಿತ ಆರೋಪಿಯಾಗಿದ್ದು ಇ‌ನ್ನೋರ್ವ ಆರೋಪಿ ಸಂತೋಷ ದತ್ತಾ ಪಡ್ತಿ ಪರಾರಿಯಾಗಿದ್ದಾನೆ.

ಕಾಡು ಹಂದಿಯನ್ನು ಬೇಟೆಯಾಡಿರುವ ಕುರಿತ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ ಕೆ ಸಿ ಇವರ ಮಾರ್ಗದರ್ಶನದಲ್ಲಿ ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಯ್ಯ ಅಣ್ಣಯ್ಯ ಗೌಡ ಮತ್ತು ಮಾಸ್ತಿಕಟ್ಟಾ ವಲಯ ಅರಣ್ಯಾಧಿಕಾರಿ ವಿನಾಯಕ ಪಿ ನಾಯ್ಕ ಹೆಬ್ಬುಳ ವಲಯ ಅರಣ್ಯಾಧಿಕಾರಿ ಅರುಣ ನಡಕಟ್ಟಿನ, ಹೆಬ್ಬುಳ ಅರಣ್ಯ ಗಸ್ತು ಪಾಲಕ ಚನ್ನಪ್ಪ ಲಮಾಣಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಓರ್ವನನ್ನು ಬಂಧಿಸಿರುವದಲ್ಲದೆ ಆರೋಪಿತರು ಪಕ್ಕದ ತೋಟದಲ್ಲಿ ಹುಗಿದಿಟ್ಟ ಕಾಡುಹಂದಿಯ ತಲೆ, ಕರುಳು ಮತ್ತು ಕಾಲುಗಳನ್ನು ವಶಕ್ಕೆ ಪಡೆದು ಮಹಜರು ನಡೆಸಿದ್ದಾರೆ. ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಪ್ರಕಾರ ಪ್ರಕರಣ ದಾಖಲಾಗಿದೆ.