ಹಾಸನ: ಮದುವೆಗೆ ಒಪ್ಪದ ಹಿನ್ನೆಲೆ ಸಿನಿಮೀಯ ರೀತಿಯಲ್ಲಿ ಶಾಲಾ ಶಿಕ್ಷಕಿಯ ಅಪಹರಣ

ಹಾಸನ: ಶಾಲೆಗೆ ಹೊರಟಿದ್ದ ಶಿಕ್ಷಕಿಯೊಬ್ಬರನ್ನು ಸಿನಿಮಾ ಸ್ಟೈಲಿನಲ್ಲಿ ಅಪಹರಿಸಿದ ಘಟನೆ ಹಾಸನದ ಹೊರವಲಯದಲ್ಲಿ ನಡೆದಿದೆ. ಮದುವೆಗೆ ಒಪ್ಪದ ಕಾರಣಕ್ಕಾಗಿ ದ್ವೇಷದಿಂದ ಯುವತಿಯನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿದೆ.

ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಘಟನೆ ನಡೆದಿದೆ. ಅರ್ಪಿತಾ ಎಂಬ ಶಿಕ್ಷಕಿಯನ್ನು ರಾಮು ಮತ್ತು ಆತನ ಪೋಷಕರು ಸೇರಿ ಅಪಹರಣ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮದುವೆ ಒಪ್ಪಂದಕ್ಕೆ‌ ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನೇ ದುರುಳರು ಅಪಹರಿಸಿದ್ದಾರೆ ಎಂದು ಹೇಳಲಾಗಿದೆ.

ಅರ್ಪಿತಾ ಅವರು ಬೆಳಗ್ಗೆ ಶಾಲೆಗೆ ಹೊರಟಿದ್ದು ನಗರದ ಒಳರಸ್ತೆಯಿಂದ ಪ್ರಧಾನ ರಸ್ತೆಗೆ ಕಾಲಿಡುತ್ತಿದ್ದಂತೆಯೇ ಕಾದು ಕುಳಿತಿದ್ದ ಸಂಬಂಧಿಕ ರಾಮು ಮತ್ತು ಇತರರು ಸೇರಿ ಆಕೆಯನ್ನು ಕಾರಿಗೆ ಎತ್ತಾಕಿಕೊಂಡು ಹೋಗಿದ್ದಾರೆ.

ಹದಿನೈದು ದಿನಗಳ ಹಿಂದೆ ರಾಮು ಮತ್ತು ಪೋಷಕರು ಮದುವೆ ಪ್ರಸ್ತಾಪದೊಂದಿಗೆ ಯುವತಿ ಮನೆಗೆ ಬಂದಿದ್ದರು. ಆದರೆ, ಮದುವೆ ಪ್ರಸ್ತಾಪಕ್ಕೆ ಯುವತಿ ಹಾಗು ಯುವತಿ ಕುಟುಂಬ ಸದಸ್ಯರು ಒಪ್ಪಿಗೆ ನೀಡಿರಲಿಲ್ಲ. ಇದೀಗ ಮದುವೆ ಮಾಡಿಕೊಡಲು ಒಪ್ಪದ ಸಿಟ್ಟಿನಲ್ಲಿ ಯುವತಿಯನ್ನೇ ಅಪಹರಣ ಮಾಡಿದ್ದಾರೆ ಎನ್ನಲಾಗಿದೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಶಿಕ್ಷಕಿ ಅರ್ಪಿತಾ ಬೆಳಗ್ಗೆ ಮನೆಯಿಂದ ಹೊರಟು ಅಡ್ಡ ರಸ್ತೆ ಮೂಲಕ ಪ್ರಧಾನ ರಸ್ತೆಗೆ ಬಂದು ಎಡಕ್ಕೆ ತಿರುಗಿ ಮುಂದೆ ಸಾಗುತ್ತಿದ್ದಂತೆಯೇ ಅವರನ್ನೇ ಕಾದು ಕುಳಿತಿದ್ದ ಇನ್ನೋವಾ ಕಾರು ಹಿಂಬಾಲಿಸಿದೆ. ಅರ್ಪಿತಾ ಅವರಿಗಿಂತ ಕಾರು ಸ್ವಲ್ಪ ಮುಂದೆ ಹೋಗಿ ನಿಂತಿದೆ. ಆಗ ಅಲ್ಲೇ ಇದ್ದ ಇಬ್ಬರು ಅರ್ಪಿತಾ ಅವರನ್ನು ತಡೆದು ಎತ್ತಿ ಕಾರಿಗೆ ಹಾಕುತ್ತಾರೆ. ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಶಿಕ್ಷಕಿ ಕೆಲಸ ಮಾಡುತ್ತಿದ್ದ ಶಾಲೆ ಮುಂಭಾಗವೇ ಈ ಅಪಹರಣ ನಡೆದಿದೆ. ಶಿಕ್ಷಕಿ ಅರ್ಪಿತ ಪ್ರತಿರೋಧ ತೋರಿದರೂ ಕಿರಾತಕರು ಆಕೆಯನ್ನು ಬಿಟ್ಟಿಲ್ಲ.

ಅಪಹರಣ ಮಾಡಿದವರು ಯಾರು ಎನ್ನುವುದು ಸ್ಪಷ್ಟವಾಗಿ ತಿಳಿದಿರುವುದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಅದರೆ, ತಕ್ಷಣಕ್ಕೆ ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನುವುದನ್ನು ತಿಳಿಬೇಕಾಗಿದೆ. ರಾಮುವಿನ ಕುಟುಂಬದ ಇತರ ಸದಸ್ಯರೂ ಜತೆಗೆ ಇದ್ದುದರಿಂದ ಅರ್ಪಿತಾ ಅವರಿಗೆ ಅಪಾಯವೇನೂ ಆಗದು ಎಂದು ನಂಬಲಾಗಿದೆ. ಹಾಸನ ಪೊಲೀಸರು ಸಿಸಿ ಟಿವಿ ಕ್ಯಾಮೆರಾಗಳು, ಜನರ ಮಾಹಿತಿಯನ್ನು ಆಧರಿಸಿ ಅಪಹರಣ ಮಾಡಿ ಎಲ್ಲಿಗೆ ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.