ಕುಮಾರಸ್ವಾಮಿಯವರಿಗೆ ರೂ. 2,000 ದಷ್ಟು ವಿದ್ಯುತ್ ಬಿಲ್ ಕಟ್ಟಲಾಗದ ದುರ್ಗತಿ ಬಂದಿಲ್ಲ: ಪ್ರಜ್ವಲ್ ರೇವಣ್ಣ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಿದ್ಯುತ್ ಕಳ್ಳ ಎಂದು ಪೋಸ್ಟರ್ ಅಂಟಿಸುತ್ತಿರುವ ಮತ್ತು ಅವಹೇಳನಕಾರಿ ಮಾತುಗಳನ್ನಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ರಾಜ್ಯದ ಪ್ರಮುಖ ನಾಯಕರು ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರಿಗೆ 2,000 ವಿದ್ಯುತ್ ಬಿಲ್ ಕಟ್ಟದಷ್ಟು ದುರ್ಗತಿಯೇನೂ ಬಂದಿಲ್ಲ, ವಿದ್ಯುತ್ ದೀಪಗಳ ಅಲಂಕಾರಕ್ಕೆ ಅವರಿಂದ ಕಾಂಟ್ರ್ಯಾಕ್ಟ್ ಪಡೆದವ ಮಾಡಿದ ಎಡವಟ್ಟಿಗೆ ಅವರನ್ನು ದೂರುವುದು ಸರಿಯಲ್ಲ ಎಂದು ಪ್ರಜ್ವಲ್ ಹೇಳಿದರು. ಇದು ಬಹಳ ಕ್ಷುಲ್ಲಕ ವಿಚಾರ, ತಾನು ಪತ್ರಿಕೆಗಳಲ್ಲಿ ಓದಿದ ಹಾಗೆ ಕಾಂಗ್ರೆಸ್ ಪಕ್ಷದ ನಾಯಕರೇ ಇಂಥ ಅವಹಳನಕಾರಿ ಪೋಸ್ಟರ್ ಗಳನ್ನು ವಿರೋಧಿಸುತ್ತಿದ್ದಾರೆ. ಇದರಿಂದ ಇದೆಷ್ಟು ಸಣ್ಣ ವಿಚಾರ ಅನ್ನೋದು ಗೊತ್ತಾಗುತ್ತದೆ ಎಂದು ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.