ವಿದ್ಯುತ್​ ಕ್ಷಾಮ ನೀಗಿಸಲು ಬೇರೆ ರಾಜ್ಯದಿಂದ ವಿದ್ಯುತ್​​ ಖರೀದಿ, ಸೆಕ್ಷನ್​ 11 ಜಾರಿ: ಕೆಜೆ ಜಾರ್ಜ್

ಬೆಂಗಳೂರು ನ.21: ತೀವ್ರ ಬರದ ನಡುವೆಯೂ ಹೆಚ್ಚುತ್ತಿರುವ ವಿದ್ಯುತ್  ಬೇಡಿಕೆಯನ್ನು ಪೂರೈಸಲು ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಸದ್ಯದ ಅಂಕಿ ಅಂಶಗಳ ಪ್ರಕಾರ, ರಾಜ್ಯದ ದೈನಂದಿನ ವಿದ್ಯುತ್ ಬೇಡಿಕೆ ಸುಮಾರು 14,000 ಮೆ.ವ್ಯಾ ಇದೆ. ನೀರಾವರಿ ಪಂಪ್‌ಸೆಟ್ ಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ಸುಮಾರು 4,500 ಮೆ.ವ್ಯಾ ಇದೆ. ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆ ಪ್ರಮಾಣ ಹೆಚ್ಚಳದ ಜೊತೆಗೆ, ವಿದ್ಯುಚ್ಛಕ್ತಿ ಕಾಯ್ದೆ ಸೆಕ್ಷನ್ 11 ಜಾರಿ ಮಾಡಿದ್ದೇವೆ ಎಂದು ಇಂಧಿನ ಸಚಿವ ಕೆಜೆ ಜಾರ್ಜ್ ಹೇಳಿದರು.

ಸಚಿವ ಕೆಜೆ ಜಾರ್ಜ್​ ಅವರು ಇಂದು (ನ.21) ಬೆಸ್ಕಾಂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 2023ರ ಅಕ್ಟೋಬರ್ 17ರಿಂದ ಸೆಕ್ಷನ್ 11 ಜಾರಿಗೊಳಿಸಲಾಗಿದ್ದು, ಉತ್ಪಾದಕರಿಂದ 1000 ಮೆ.ವ್ಯಾಗೂ ಹೆಚ್ಚಿನ ವಿದ್ಯುತ್ ಪಡೆದುಕೊಳ್ಳಲಾಗಿದೆ. ಇತರ ರಾಜ್ಯಗಳಿಂದ ವಿದ್ಯುತ್ ವಿನಿಮಯ ಮತ್ತು ಇಂಧನ ಮಾರುಕಟ್ಟೆಯಿಂದ ಖರೀದಿಸಿದ ಬಳಿಕ ನೀರಾವರಿ ಪಂಪ್‌ಸೆಟ್ ಫೀಡರ್‌ಗಳಿಗೆ 7 ತಾಸು ವಿದ್ಯುತ್ ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

2024ರ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸರಾಸರಿ ವಿದ್ಯುತ್ ಬೇಡಿಕೆ ಸುಮಾರು 15,500 ಮೆ.ವ್ಯಾ ನಿಂದ 16,500 ಮೆ.ವ್ಯಾ. ತಲುಪುವ ನಿರೀಕ್ಷೆಯಿದೆ. ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲು, ಇಂಧನ ಮಾರುಕಟ್ಟೆಯಿಂದ ವಿದ್ಯುತ್ ಸಂಗ್ರಹಣೆ ಮತ್ತು ಪಂಜಾಬ್ (300ಮೆ.ವ್ಯಾ) ಮತ್ತು ಉತ್ತರ ಪ್ರದೇಶದಿಂದ (100-600ಮೆ.ವ್ಯಾ.) ವಿದ್ಯುತ್ ವಿನಿಮಯ ಮಾಡಲಾಗುತ್ತದೆ. ರಾಜ್ಯದ ಉಷ್ಣ ವಿದ್ಯುತ್ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವುದು ಮತ್ತು ಎಓಹೆಚ್ ಜನರೇಟರ್‌ಗಳ ಕಾರ್ಯಾಚರಣೆ ಪುನಾರಂಭಿಸಲಾಗುವುದು ಎಂದರು

ಉಷ್ಣ ವಿದ್ಯುತ್ ಸ್ಥಾವರಗಳ ಉತ್ಪಾದನೆಯನ್ನು 3500 ಮೆ.ವ್ಯಾವರೆಗೆ ಹೆಚ್ಚಿಸುವುದು. 370 ಮೆ.ವ್ಯಾ. ಸಾಮರ್ಥ್ಯದ ಯಲಹಂಕ ಅನಿಲ ಸ್ಥಾವರದಲ್ಲಿ ಶೀಘ್ರದಲ್ಲೇ ಉತ್ಪಾದನೆ ಆರಂಭಿಸುತ್ತೇವೆ. ಬೇಡಿಕೆ ಆಧರಿಸಿ ಅಲ್ಪಾವಧಿ ಆಧಾರದಲ್ಲಿ 1500 ಮೆ.ವ್ಯಾ. ವಿದ್ಯುತ್ ಖರೀದಿಸಲು ಕೆಇಆರ್‌ಸಿ ಅನುಮೋದನೆ ಪಡೆದು, ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ 2023ರ ಅಕ್ಟೋಬರ್‌ನಿಂದ ತಿಂಗಳಿಗೆ 2 ಲಕ್ಷ ಟನ್‌ಗಳಷ್ಟು ಹೆಚ್ಚುವರಿ ಕಲ್ಲಿದ್ದಲು ಲಭ್ಯವಾಗುತ್ತಿದೆ. 2023ರ ಡಿಸೆಂಬರ್ 1ರಿಂದ ಕೂಡಿಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ 150 ಮೆ.ವ್ಯಾ ಉತ್ಪಾದನೆ ಪುನಾರಂಭಿಸಲಾಗುವುದು. ಥರ್ಮಲ್ ಜನರೇಟರ್‌ಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ದೇಶೀಯ ಕಲ್ಲಿದ್ದಲಿನೊಂದಿಗೆ ಅಮದು ಕಲ್ಲಿದ್ದಲನ್ನು ಸರಾಸರಿ ಶೇ.10ರಷ್ಟು ಮಿಶ್ರಣ ಮಾಡಲಾಗುವುದು ಎಂದು ಹೇಳಿದರು.

ಈ ವರ್ಷ ಮಳೆಯ ಕೊರತೆ ಉಂಟಾಗಿದೆ. ಒನ್​ ಟು ಡಬಲ್ ಇಂಧನಕ್ಕೆ ಬೇಡಿಕೆ ಜಾಸ್ತಿಯಾಗಿದೆ. ನಮಗೆ ಮುಖ್ಯಮಂತ್ರಿಗಳು ಸಾಕಷ್ಡು ಬೆಂಬಲ ನೀಡಿದ್ದಾರೆ. ವಿದ್ಯುತ್ ಖರೀದಿ‌ ಮಾಡಲು ಹಣಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಾರಿಗೂ ಸಮಸ್ಯೆಯಾಗದಂತೆ ಕ್ರಮ ತೆಗದುಕೊಳ್ಳುತ್ತೇವೆ. ಸದ್ಯ ವಿದ್ಯುತ್ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಲಾಗುತ್ತಿದೆ. ಫೆಬ್ರವರಿ ಬಳಿಕ ವಿದ್ಯುತ್ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಿರೀಕ್ಷೆಗೂ ಮೀರಿ ಮಳೆ ಕೈಕೊಟ್ಟಿದೆ. 16 ಸಾವಿರದ 900 ಮೆಗಾ ವ್ಯಾಟ್ ತನಕ ವಿದ್ಯುತ್ ಪೂರೈಕೆ ಮಾಡಲಾಗಿತ್ತು.

ನಂತರ ಹೆಚ್ಚಾಗಿ ಸೋಲಾರ್​ನಿಂದ ವಿದ್ಯುತ್ ಪೂರೈಕೆ ಆಗುತ್ತಿತ್ತು. ಆದರೆ ಮಳೆ ಕೊರತೆಯಿಂದ ಸೋಲಾರ್​ನಿಂದ ವಿದ್ಯುತ್ ಪೂರೈಕೆ ಕಡಿಮೆಯಾಯ್ತು. ಕರ್ನಾಟಕವೇ ಕತ್ತಲೆಗೆ ಹೋಗಿದೆ. ಹೀಗಿದ್ದಾಗ್ಯೂ ನಾವು ಇಂಡಸ್ಟ್ರಿಸ್​ಗೆ ಪವರ್ ಕಟ್ ಮಾಡಿಲ್ಲ. ರಾಯಚೂರು, ಕಲಬುರಗಿ ಮತ್ತು ವಿವಿಧ ಕಡೆಗಳಲ್ಲಿ ಎಸ್ಕಾಂಗೆ ಸೂಚಿಸಿ ಕಬ್ಬು, ಬತ್ತ ಬೆಳೆಗಾರರಿಗೆ ನೀರು ಒದಗಿಸಲು ವಿದ್ಯುತ್ ಪೂರೈಕೆಗೆ ಅನುಕೂಲ ಮಾಡಿದ್ದೇವೆ ಎಂದು ಹೇಳಿದ್ದಾರೆ.

ದಾಖಲೆ ಮಟ್ಟದಲ್ಲಿ ಥರ್ಮಲ್ ವಿದ್ಯುತ್ ಪೂರೈಕೆ ರಾಯಚೂರು, ಕಲಬುರಗಿಯಲ್ಲಿ ಆಗಿದೆ‌. ಮಳೆಗಾಲದಲ್ಲಿ ಸಾಮಾನ್ಯವಾಗಿ ಥರ್ಮಲ್‌ ಪವರ್ ‌ಪ್ಲಾಂಟ್ ಮುಚ್ಚುತಿದ್ದೆವು. ಈ ಬಾರಿ 16,900‌ ಮೆ.ವ್ಯಾ ಬೇಡಿಕೆ ಇದೆ. ಶೇ. 51ರಷ್ಟು ನವೀಕರಸಿಬಹುದಾದ ವಿದ್ಯುತ್ ನಾವು ಉತ್ಪಾದಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಏನಿದು ವಿದ್ಯುಚ್ಛಕ್ತಿ ಕಾಯ್ದೆ ಸೆಕ್ಷನ್​ 11

ತೀವ್ರ ವಿದ್ಯುತ್ ಕೊರತೆಯ ಹಿನ್ನೆಲೆ ವಿದ್ಯುಚ್ಛಕ್ತಿ ಕಾಯ್ದೆ ಸೆಕ್ಷನ್ 11ನ್ನು ಜಾರಿ ಮಾಡಿದೆ. ಈ ಮೂಲಕ ರಾಜ್ಯದ ಖಾಸಗಿ ಸೇರಿದಂತೆ ಎಲ್ಲಾ ವಿದ್ಯುತ್ ಉತ್ಪಾದಕರು ವಿದ್ಯುತ್ ಅನ್ನು ಹೊರ ರಾಜ್ಯಗಳಿಗೆ ಮಾರುವಂತಿಲ್ಲ. ಎಲ್ಲ ಉತ್ಪಾದಕರು ವಿದ್ಯುತ್ ಅನ್ನು ರಾಜ್ಯದ ವಿದ್ಯುತ್ ಸರಬರಾಜುದಾರರಿಗೇ ಮಾರಬೇಕು. ರಾಜ್ಯದೊಳಗೆ ಪರವಾನಗಿ ಹೊಂದಿದ ವಿತರಕರೊಂದಿಗೆ ಖಾಸಗಿ ಉತ್ಪಾದಕರು ಅರ್ಹವಾದ ವಿದ್ಯುತ್ ಖರೀದಿ ಒಪ್ಪಂದ (ಪಿಪಿಎ) ಮಾಡಿಕೊಂಡಿದ್ದರೆ ಸೆಕ್ಷನ್ 11ರ ನಿರ್ಬಂಧ ಅನ್ವಯಿಸುವುದಿಲ್ಲ. ಪೂರ್ವ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳದ ಖಾಸಗಿ ವಿದ್ಯುತ್ ಉತ್ಪಾದಕರಿಗೆ ಇನ್ಮುಂದೆ ಮುಕ್ತ ಜಾಲಕ್ಕೆ ಮಾರುವಂತಿಲ್ಲ.