ಹೊನ್ನಾವರದ ಬಳ್ಕೂರಿನಲ್ಲಿ ಮಹಿಳೆ ಮಾನಭಂಗಕ್ಕೆ ಯತ್ನ : ಬಿಹಾರ ಮೂಲದ ವ್ಯಕ್ತಿಯ ಬಂಧನ


ಹೊನ್ನಾವರ ತಾಲೂಕಿನ ಬಳ್ಕೂರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೆಗ್ಗಾರ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಸಮೀಪ ಬಳ್ಕೂರಿನಿಂದ ಹೆಗ್ಗಾರ ಕಡೆಗೆ ಹೋಗುತ್ತಿದ್ದ ಮಹಿಳೆಯೊರ್ವಳ ಮೇಲೆ ಬಿಹಾರ ಮೂಲದ ವ್ಯಕ್ತಿಯೋರ್ವ ಮಾನಭಂಗಕ್ಕೆ ಯತ್ನಿಸಿರುವ ಘಟನೆ ನಡೆದಿದೆ.

ಮರುಳುಗಾರಿಕೆಗೆ ಆಗಮಿಸಿದ ಬಿಹಾರ ಮೂಲದ ವ್ಯಕ್ತಿ ಎಂದು ಅಂದಾಜಿಸಲಾಗಿದ್ದು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಸಂಜೆ 5 ಗಂಟೆಯ ಸುಮಾರಿಗೆ ಬಳ್ಕೂರಿನಿಂದ ಹೆಗ್ಗಾರ ಕಡೆಗೆ ಮಹಿಳೆ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕಳಿಗೆದ್ದೆ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಸಮೀಪ ಅಪರಿಚಿತ ವ್ಯಕ್ತಿ ಹಿಂದಿನಿಂದ ಬಂದು ಮಹಿಳೆಯ ಬಾಯಿಗೆ ತನ್ನ ಕೈಯಿಂದ ಒತ್ತಿ ಹಿಡಿದು, ನೆಲಕ್ಕೆ ಬೀಳಿಸಿದ್ದಾನೆ.ಈ ಸಂದರ್ಭದಲ್ಲಿ ರಸ್ತೆಯಲ್ಲಿ ಜನರು ಬರುತ್ತಿರುವುದನ್ನು ಕಂಡು ಆರೋಪಿ ಪರಾರಿಯಾಗಿದ್ದ. ಈ ಕುರಿತು ನೊಂದ ಮಹಿಳೆ ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಬಳ್ಕೂರ ಭಾಗದಲ್ಲಿ ಅಕ್ರಮ ಮರುಳುಗಾರಿಕೆ ಎಗ್ಗಿಲದೆ ನಡೆಯುತ್ತಿದ್ದು ಬಿಹಾರ ಮೂಲದ ವ್ಯಕ್ತಿಗಳನ್ನು ಮರುಳುಗಾರಿಕೆಗೆ ಬಳಸಲಾಗುತ್ತಿದೆ.ಇದೆ ಸಂದರ್ಭದಲ್ಲಿ ವಾಸವಾಗಿದ್ದ ಬಿಹಾರ ಮೂಲದ 6 ಜನರ ಪೈಕಿ ಒಬ್ಬ ವ್ಯಕ್ತಿ ಘಟನೆ ನಡೆದ ಸಮಯದಿಂದ ನಾಪತ್ತೆಯಾಗಿದ್ದು, ಅಲ್ಲದೆ ಈ ವ್ಯಕ್ತಿಯ ಬಟ್ಟೆಗಳನ್ನು ವಾಸ ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿದ್ದಾನೆ ಎಂದು ಮಾಹಿತಿ ಲಭ್ಯವಾದ ತಕ್ಷಣ ಮಂಕಿ ಠಾಣೆಯ ಪೋಲೀಸರು ತಮ್ಮ ತನಿಖೆಯನ್ನು ಚುರುಕುಗೊಳಿಸಿ, ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಬಳ್ಕೂರ ಭಾಗದಲ್ಲಿ ಮರುಳುಗಾರಿಕೆಯಲ್ಲಿ ಬಿಹಾರ ಮೂಲದ ಜನರೇ ಹೆಚ್ಚಾಗಿದ್ದು, ಈ ಘಟನೆಯಿಂದ ಇಲ್ಲಿನ ನಿವಾಸಿಗಳಲ್ಲಿ ಇನ್ನಷ್ಟು ಆತಂಕ ಎದುರಾಗಿದೆ.