ಸಿದ್ದಾಪುರದಲ್ಲಿ ಕಸ ಸಂಗ್ರಹಣೆ ವಾಹನ ಓಡಿಸಿದ ಜಿ.ಪಂಚಾಯತ್‌ ಸಿಇಒ. ಮಹಿಳಾ ಚಾಲಕಿಯ ಕೌಶಲ್ಯ ಪರಿಶೀಲಿಸಿದ ಕಾರ್ಯನಿರ್ವಾಹಕ ಅಧಿಕಾರಿ



ಸಿದ್ದಾಪುರದಲ್ಲಿ, ಜಿ.ಪಂಚಾಯತ್‌ ಸಿಇಒ ಈಶ್ವರ್‌ ಕಾಂದೂ ಸ್ವತಃ ಕಸ ಸಂಗ್ರಹಣೆಯ ವಾಹನ ಓಡಿಸಿದರು. ಜೊತೆಗೆ ಕೆನರಾ ಆರ್ಸೆಟಿಯ ಮೂಲಕ ತರಬೇತಿ ಪಡೆದ ಮಹಿಳಾ ಸ್ವ ಸಹಾಯ ಸಂಘದ ಚಾಲಕಿಯ ಚಾಲನಾ ಕೌಶಲ್ಯ ಪರಿಶೀಲಿಸುವ ಮೂಲಕ ಚಾಲನಾ ಕೌಶಲ್ಯದ ಕುರಿತು ಮಾಹಿತಿ ನೀಡಿದ್ರು.

ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಭೇಟಿನೀಡಿದ ಸಂದರ್ಭದಲ್ಲಿ, ಕಾನಗೋಡ ಗ್ರಾಪಂಗೆ ತೆರಳಿದ ಜಿಪಂ ಸಿಇಒ, ಸ್ವತಃ ವಾಹನ ಚಾಲನೆ ಮಾಡುವ ಮೂಲಕ ಚಾಲಕರಾದವರು ವಾಹನ ಚಾಲನೆ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು, ವಾಹನ ಸ್ಟಾರ್ಟ್, ಗೇರ್‌ಗಳ ಬದಲಾವಣೆ, ವಾಹನ ನಿಯಂತ್ರಣ, ಬ್ರೇಕ್ ಹಾಕುವ ವಿಧಾನ ಸೇರಿದಂತೆ ವಿವಿಧ ಚಾಲನಾ ಕೌಶಲ್ಯಗಳ ಕುರಿತು ತಿಳಿಸಿಕೊಟ್ಟರು. ಜೊತೆಗೆ ತರಬೇತಿ ಪಡೆದ ಸ್ವಸಹಾಯ ಸಂಘದ ಮಹಿಳಾ ಚಾಲಕಿಯಿಂದ ವಾಹನ ಚಾಲನೆ ಮಾಡಿಸಿ ಪರಿಶೀಲಿಸಿ ಉತ್ತಮವಾಗಿ ವಾಹನ ಚಲಾಯಿಸುವಂತೆ ಪ್ರೇರೆಪಿಸಿದ್ರು.

ಈ ಸಂದರ್ಭದಲ್ಲಿ ತಾಪಂ ಇಒ ದೇವರಾಜ್ ಹಿತ್ತಲಕೊಪ್ಪ, ನರೇಗಾ ಎ.ಡಿ ವಿದ್ಯಾ ದೇಸಾಯಿ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.