ಮಂಗಳೂರು: ನವರಾತ್ರಿ ಪ್ರಯುಕ್ತ ಆಯೋಜಿಸಲಾಗಿದ್ದ ದಾಂಡಿಯಾ ನೃತ್ಯಕ್ಕೆ ದುರ್ಗಾವಾಹಿನಿ ಸಂಘಟನೆ ವಿರೋಧ, ಕಾರಣವೇನು?

ಮಂಗಳೂರು, ಅ.20: ಮಂಗಳೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ನವರಾತ್ರಿ ಅಂಗವಾಗಿ ನಗರದ ದೇವಸ್ಥಾನಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಇದರ ನಡುವೆ ಮಂಗಳೂರಿನಲ್ಲಿ ನವರಾತ್ರಿ ಅಂಗವಾಗಿ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಇದಕ್ಕೆ ದುರ್ಗಾವಾಹಿನಿ ಸಂಘಟನೆ, ವಿಶ್ವ ಹಿಂದೂ ಪರಿಷತ್ ವಿರೋಧ ವ್ಯಕ್ತಪಡಿಸಿದೆ.

ನವರಾತ್ರಿ ಅಂಗವಾಗಿ ಮಂಗಳೂರಿನ ವಿವಿಧ ಕಡೆ ಇಂದು ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದಾಂಡಿಯಾ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಮಾದಕ ವಸ್ತುಗಳನ್ನು ಬಳಸುತ್ತಾರೆ ಎಂದು ಆರೋಪಿಸಿ ದಾಂಡಿಯಾ ನೃತ್ಯ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಮಂಗಳೂರು ಪೊಲೀಸ್ ಕಮಿಷನರ್​ಗೆ ದುರ್ಗಾವಾಹಿನಿ ಸಂಘಟನೆ ಮನವಿ ಮಾಡಿದೆ. ಡ್ರಗ್ಸ್, ಮಾದಕ ದ್ರವ್ಯ, ಮದ್ಯಪಾನ ಮಾಡಿ ಅಸಭ್ಯ ನೃತ್ಯ ಮಾಡುತ್ತಾರೆ ಎಂದು ದುರ್ಗಾವಾಹಿನಿ ಸಂಘಟನೆ ಆರೋಪ ಮಾಡಿದೆ

ಇನ್ನು ನವರಾತ್ರಿ ಹಿನ್ನೆಲೆ ಮಂಗಳೂರಿನಲ್ಲಿ ಸಂಜೆ ಆಗುತ್ತಿದ್ದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ. ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರ, ಬೋಳಾರದ ಮಂಗಳಾದೇವಿ ದೇವಸ್ಥಾನ, ಉರ್ವದ ಮಾರಿಗುಡಿ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಸಂಗೀತ, ನಾಟ್ಯ ಮತ್ತು ಭಕ್ತಿರಸದ ಕಾರ್ಯಕ್ರಮಗಳು ನಡೆಯುತ್ತಿವೆ.

ಮಂಗಳೂರಿಗೆ ಹೆಸರು ತಂದುಕೊಟ್ಟ ಶ್ರೀ ಮಂಗಳಾದೇವಿ ಸನ್ನಿಧಿಯಲ್ಲಿ ತಲೆತಲಾಂತರಗಳಿಂದ ನವರಾತ್ರಿ ಉತ್ಸವ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನವರಾತ್ರಿ ಸಂಭ್ರಮವನ್ನು ಮಂಗಳೂರು ದಸರಾ ಎಂದು ಇಲ್ಲಿನ ಜನ ಮೈಸೂರು ದಸರಾದಂತೆಯೇ ಸಂಭ್ರಮದಿಂದ ಆಚರಿಸುತ್ತಾರೆ.