ಹೊನ್ನಾವರ: ಮಂಕಿ ಠಾಣೆಯ ಪೊಲೀಸರ ತಂಡ ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿ

ಹೊನ್ನಾವರ : ತಾಲೂಕಿನ ಮಂಕಿ ಠಾಣೆಯ ಪೊಲೀಸರ ತಂಡ ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದು ಖದೀಮರಿಂದ 15 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿತರು ಹುಬ್ಬಳ್ಳಿಯ ಜೈಲಾನಿ ಭಾಷಾಸಾಬ್ ಗಂಜಿಗಟ್ಟಿ,ಧಾರವಾಡ ಜಿಲ್ಲೆ ಕುಂದಗೋಳದ ರವಿಚಂದ್ರ ಶಿವಪ್ಪ ತಳವಾರ ಎಂದು ಗುರುತಿಸಲಾಗಿದೆ. ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಆರೋಪಿತರು ಮೋಟಾರ್ ವಾಹನವನ್ನು ನಿಲ್ಲಿಸದೇ, ಸಂಶಯಾಸ್ಪದವಾಗಿ ಚಲಾಯಿಸಿಕೊಂಡು ಬಂದಿದ್ದರು.ಪೊಲೀಸರು ಈ ವೇಳೆ ಆರೋಪಿತರನ್ನು ಅಡ್ಡಗಟ್ಟಿ ನಿಲ್ಲಸಿ ವಿಚಾರಿಸಿದಾಗ ಸರ್ಮಪಕವಾದ ಉತ್ತರ ನೀಡಿಲ್ಲ. ಕೂಲಂಕುಶವಾಗಿ ವಿಚಾರಣೆಗೆ ಒಳಪಡಿಸಿದಾಗ ಮೋಟಾರ್ ವಾಹನವನ್ನು ಎಲ್ಲಿಂದಲೋ ಕಳುವು ಮಾಡಿಕೊಂಡು ಬಂದಿರುವುದು ತನಿಖೆಯಿಂದ ತಿಳಿದು ಬಂದಿದೆ. ಮಂಕಿ ಠಾಣೆಯ ಪೊಲೀಸ್ ಉಪನಿರೀಕ್ಷಕ ಭರತಕುಮಾರ ವಿ. ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಆರೋಪಿತರು ಉಡುಪಿ ಕಡೆಯಿಂದ ಕಪ್ಪು ಬಣ್ಣದ ಟಿವಿಎಸ್ ರೈಡರ್ ಮೋಟಾರ್ ವಾಹನವನ್ನು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿತರನ್ನು ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ
ಕುಂದಗೋಳ ಮೂಲದ ಆರೋಪಿತರಾದ ಸಲ್ಮಾನ ಇಮಾಮ್‌ಸಾಬ್ ತಹಶೀಲ್ದಾರ, ಜಗದೀಶ ಕೋಟೆಪ್ಪ ಬಂಡಿವಾಡ ಇವರೊಂದಿಗೆ ಸೇರಿ ವಿವಿಧ ಜಿಲ್ಲೆಗಳಲ್ಲಿ ಸುಮಾರು 14 ಮೋಟಾರ್ ಸೈಕಲ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಅಂಕೋಲಾ ಪೊಲೀಸ್ ಠಾಣೆಯ1, ಮುರುಡೇಶ್ವರ ಪೊಲೀಸ್ ಠಾಣೆಯ 1 ಹಾಗೂ ಮಂಕಿ ಪೊಲೀಸ್ ಠಾಣೆಯ ಪ್ರಕರಣದಲ್ಲಿನ 1 ಮೋಟಾರ್ ವಾಹನ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್‌ನ್ನು, ಕಳ್ಳತನಮಾಡಿದ ಎಲ್ಲಾ ಮೋಟಾರ ವಾಹನಗಳನ್ನು ಪೊಲೀಸರು ಜಪ್ತು ಮಾಡಿಕೊಂಡಿದ್ದಾರೆ. ಇವುಗಳೆಲ್ಲವುಗಳ ಒಟ್ಟು ಮೌಲ್ಯ ₹ 8,35,000 ಎಂದು ಅಂದಾಜಿಸಲಾಗಿದೆ. ಆರೋಪಿತನಾದ ಜೈಲಾನಿ ಭಾಷಾಸಾಬ್ ಗಂಜಿಗಟ್ಟಿ ಈತನ ಮೇಲೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು,ವಿದ್ಯಾನಗರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಶಿಕ್ಷೆಯಾಗಿರುತ್ತದೆ. ಜಗದೀಶ ಕೋಟೆಪ್ಪ ಬಂಡಿವಾಡ ಈತನ ಮೇಲೆ ಬೇಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣ ದಾಖಲಾಗಿರುವ ಮಾಹಿತಿ ಇದೆ. ಎಸ್ ಪಿ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ, ಶ್ರೀಕಾಂತ ಕೆ. ಪೊಲೀಸ್ ಉಪಾಧೀಕ್ಷಕರು ಭಟ್ಕಳರವರ ಮಾರ್ಗದರ್ಶನದಲ್ಲಿ ಚಂದನಗೋಪಾಲ ಪ್ರಭಾರ ಪೊಲೀಸ್ ವೃತ್ತ ನಿರೀಕ್ಷಕರು ಭಟ್ಕಳ ಗ್ರಾಮಾಂತರ ವೃತ್ತರವರ ನೇತೃತ್ವದಲ್ಲಿ ಪ್ರತ್ಯೇಕ ತಂಡವನ್ನು ರಚಿಸಲಾಗಿತ್ತು. ಮಂಕಿ ಪೊಲೀಸ್ ಠಾಣೆಯ ಉಪನಿರೀಕ್ಷಕರುಗಳಾದ ಭರತಕುಮಾರ .ವಿ ಮತ್ತು ಮುಶಾಹಿದ್ ಅಹ್ಮದ್ ,ಮುರ್ಡೇಶ್ವರ ಠಾಣೆಯ ಪಿಎಸೈ ಶಿವಕುಮಾರ, ಅಪರಾಧ ವಿಭಾಗದ ಸಿಬ್ಬಂದಿಯವರಾದ ಕಿರಣಕುಮಾರ ರೆಡ್ಡಿ, ರುದ್ರಯ್ಯ ಕಾಡದೇವರ, ಲೋಕೇಶ ಕತ್ತಿ, ಪುರಂದರ ನಾಯ್ಕ, ವಿಜಯ ನಾಯ್ಕ, ಯಲ್ಲಾಪುರ ಠಾಣೆಯ ಮಹ್ಮದ ಶಫೀ,ರಾಜು ಗೌಡ, ಬಸವನಗೌಡ ಬಿರಾದಾರ ಹಾಗೂ ಸಿಬ್ಬಂದಿಗಳು ಆರೋಪಿತರನ್ನು ದಸ್ತಗಿರಿ ಮಾಡಿ 15 ಮೋಟಾರ್ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ,ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.