ಸಿದ್ದಾಪುರ ಪಟ್ಟಣ ತಾಲೂಕಾ ಆಡಳಿತ ಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು ಫಲಾನುಭವಿಗಳಿಗೆ ಪರಿಹಾರ ಹಾಗೂ ಮಂಜೂರಾತಿ ಪತ್ರ ಹಸ್ತಾಂತರಿಸಿದರು.


ಸಿದ್ದಾಪುರ ತಾಲೂಕಿನಲ್ಲಿ 1ಮನೆ ಸಂಪೂರ್ಣ ಹಾನಿಯಾಗಿದ್ದು, 3 ಮನೆಗಳಿಗೆ ತೀವ್ರ ಹಾನಿಯಾಗಿದೆ. 23 ಭಾಗಶಃ ಹಾನಿಯಾಗಿದ್ದು, ಪೂರ್ತಿ ಹಾನಿಯಾದ ಮನೆಗೆ 5 ಲಕ್ಷ ಪರಿಹಾರ, ಭಾಗಶಃ ಹಾನಿಯಾದ ಮನೆಗೆ 50 ಸಾವಿರ ಪರಿಹಾರವನ್ನು ಸರ್ಕಾರ ಘೋಷಿಸಿದೆ.
ಸರ್ಕಾರದ ಪರಿಹಾರ ವಿತರಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಬಡವರ ಪರಾವಾಗಿದೆ,ಈ ಮೊದಲು ಭಾಗಶಃ ಹಾನಿಯಾದ ಮನೆಗೆ 4 ಸಾವಿರ ನೀಡಲಾಗುತಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ 50 ಸಾವಿರಕ್ಕೆ ಹೆಚ್ಚಿಸಿದ್ದಾರೆ. ಪೂರ್ಣ ಹಾನಿಯಾದ ಮನೆಗೆ 1.20 ಲಕ್ಷ ನೀಡಲಾಗುತಿತ್ತು. ಅದನ್ನು 5 ಲಕ್ಷಕ್ಕೆ ಸೀಮಿತಗೊಳಿಸಿ ತಹಶೀಲ್ದಾರ ಖಾತೆಗೆ ಜಮಾ ಮಾಡಲಾಗಿದ್ದು, ಹಂತ ಹಂತವಾಗಿ ಫಲಾನುಭವಿ ಖಾತೆಗೆ ಜಮಾ ಆಗಲಿದೆ. ಸರ್ಕಾರ ಸಂತ್ರಸ್ಥರಿಗೆ ಧೈರ್ಯ ತುಂಬುವುದರ ಮೂಲಕ ನೊಂದವರ ಪರ ಇದೆ ಎನ್ನುವುದು ಸಾಬೀತಾಗಿದೆ. ಸರ್ಕಾರದ ಕಾರ್ಯಕ್ರಮಗಳು ಜನಪರವಾಗಿರಬೇಕು. ಫಲಾನುಭವಿಗಳು ಸರ್ಕಾರದ ಸಹಾಯಧನದ ಪ್ರಯೋಜನ ಪಡೆದುಕೊಳ್ಳಬೇಕು. ಹಿಂದೆ ಐದು ಲಕ್ಷ ಕೊಡಲಾಗುವುದು ಎಂದು ಹೇಳಿ 1.20 ಲಕ್ಷ ಕೊಟ್ಟು ಕೈತೊಳೆದುಕೊಂಡಿತ್ತು. ಆದರೀಗ ಕಾಂಗ್ರೆಸ್ ಸರ್ಕಾರ ತಾಲೂಕಾಡಳಿತದ ಖಾತೆಗೆ ಜಮಾ ಮಾಡಿದೆ ಎಂದ ಅವರು ಮನೆ ಯಜಮಾನಿಗೆ 2 ಸಾವಿರ ನೀಡುವ ಯೋಜನೆಗೆ ಸಂಬಂಧಿಸಿ ಯಾರು ಕೂಡ ತಮ್ಮ ತಾಯಿಗೆ ನೋವಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ತಾಲೂಕಾ ಪಂಚಾಯ್ತಿ ಇಓ ದೇವರಾಜ ಹಿತ್ತಲಕೊಪ್ಪ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಐ.ಜಿ.ಕೊಣ್ಣೂರ, ಸಿಪಿಐ ಕುಮಾರ ಕೆ ಉಪಸ್ಥಿತರಿದ್ದರು.