ಮಾಸ್ಕೇರಿ ನಾಯಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ಅಭಿನಂದನೀಯ- ಕಾವ್ಯ ಭಟ್

ದಾಂಡೇಲಿ : ಕನ್ನಡ ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಮಾಸ್ಕೇರಿ ಎಂ.ಕೆ.ನಾಯಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ಅಭಿನಂದನೀಯ. ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಸಾಹಿತ್ಯ ಕೃತಿಗಳನ್ನು ನೀಡುವುದರ ಜೊತೆಯಲ್ಲಿ ಇನ್ನೊಬ್ಬರಲ್ಲಿಯೂ ಸಾಹಿತ್ಯದ ಅಭಿರುಚಿಯನ್ನು ಮೂಡಿಸಿ ಅವರನ್ನು ಲೇಖಕರನ್ನಾಗಿ, ಬರಹಗಾರರನ್ನಾಗಿ, ಕವಿಗಳನ್ನಾಗಿ ಬೆಳೆಸುವ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರು ನಿಜವಾದ ನಾಡು ಕಟ್ಟುವ ಕಾಯಕಯೋಗಿದ್ದಾರೆ ಎಂದು ಲೇಖಕಿ ಹಾಗೂ ಗಾಯಕಿ ಕಾವ್ಯಾ ಭಟ್ ಅವರು ಹೇಳಿದರು.

ಅವರು ಮಾಸ್ಕೇರಿ ಸಾಹಿತ್ಯ ಸಂಸ್ಥೆಯ ಆಶ್ರಯದಡಿ ನಗರದ ಮಾಸ್ಕೇರಿ ಸಾಹಿತ್ಯ ಸಂಸ್ಥೆಯ ಸಭಾಭವನದಲ್ಲಿ ಇಂದು ನಡೆದ ಮಾಸ್ಕೇರಿ ಸಾಹಿತ್ಯ ಸಂಸ್ಥೆಯ 108ನೇ ಕೃತಿಯನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು. ನನ್ನಂತಹ ವಿದ್ಯಾರ್ಥಿನಿಯ ಕಿರು ಕಾದಂಬರಿಯನ್ನು ಉಚಿತವಾಗಿ ಪ್ರಕಟಿಸಿ ನನ್ನನ್ನು ಪ್ರೋತ್ಸಾಹಿಸಿ ಮತ್ತಷ್ಟು ಸಾಹಿತ್ಯದ ಸೇವೆ ಮಾಡಲು ಪ್ರೇರಣೆಯಾಗಿರುವ ಮಾಸ್ಕೇರಿ ನಾಯಕರ ಜೀವನ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆನರಾ ವೆಲ್ಪೇರ್ ಟ್ರಸ್ಟಿನ ಬಿ.ಎಡ್ ಕಾಲೇಜಿನ ಪ್ರಾಚಾರ್ಯೆ ಸಹನಾ ಸೂರ್ಯವಂಶಿಯವರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಲು ಪುಣ್ಯ ಮಾಡಿರಬೇಕು. ಈ ಪ್ರಪಂಚದಲ್ಲಿ ನಾವು ನೀವೆಲ್ಲರೂ ಒಂದಲ್ಲ ಒಂದು ದಿನ ಸಾಯುತ್ತೇವೆ. ಆದರೆ ಸಾಹಿತ್ಯ ಕೃತಿಗಳು ನಿತ್ಯನಿರಂತರವಾಗಿ ಸಮಾಜಕ್ಕೆ ಬೆಳಕು ನೀಡುವ ಮೂಲಕ ಕೃತಿಕಾರರ ಹೆಸರನ್ನು ಸದಾ ಅಮರಗೊಳಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಲೇಖಕಿ ಸಾಕ್ಷಿ ಸಾಮಂತ್, ಕೆನರಾ ವೆಲ್ಪೇರ್ ಟ್ರಸ್ಟಿನ ಬಿ.ಎಡ್ ಕಾಲೇಜಿನ ಉಪನ್ಯಾಸಕ ನಾಗೇಶ್ ನಾಯ್ಕ, ನ್ಯಾಯವಾದಿ ಆರ್.ವಿ.ಗಡೆಪ್ಪನವರ್, ದಯಾನಂದ ದೇಸಾಯಿ, ಕ್ರೀಡಾಪಟು ಸಂಜನಾ ಮಾಶಾಲ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಜಿ.ಪಿ.ಪೆರುಮಾಳ ಮತ್ತು ಮುಜಾಫರ್ ಅವರನ್ನು ಮಾಸ್ಕೇರಿ ಸಾಹಿತ್ಯ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯ್ತು.

ಗುರುರಾಜ ನಾಯಕ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಶ್ರದ್ಧಾ ಸಾಮಂತ್ ವಂದಿಸಿದರು. ಶಿಕ್ಷಕಿ ನಂದಿನಿ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಭಾರತಿ ಕವರಿ ಸಹಕರಿಸಿದರು.