ಕಿತ್ತುಹೋದ ದುರ್ಗಾಕೇರಿ ರಸ್ತೆಗೆ ಕಾಂಕ್ರೇಟೀಕರಣ. ಕಾಮಗಾರಿ ವೀಕ್ಷಿಸಿದ ಶಾಸಕರು

ಹೊನ್ನಾವರ ಪಟ್ಟಣದ ದುರ್ಗಾಕೇರಿ ರಸ್ತೆಗೆ ಕಳೆದ ಬೇಸಿಗೆಯಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಆದರೆ ಮಳೆಗೆ ರಸ್ತೆ ಹಾಳಾಗಿದ್ದು ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿತ್ತು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ದಿನಕರ ಶೆಟ್ಟಿ ಅವರು ಸದರಿ ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ನಿರಂತರವಾಗಿ ಮಳೆ ಸುರಿದಿದ್ದರಿಂದ ರಸ್ತೆಯನ್ನು ಸರಿಪಡಿಸಲು ಸಾಧ್ಯವಾಗಿರಲಿಲ್ಲ.

ಈಗ ಮಳೆ ಕಡಿಮೆಯಾಗಿದ್ದು, ರಸ್ತೆಯ ಕಾಂಕ್ರೇಟೀಕರಣವನ್ನು ಆರಂಭಿಸಲಾಗಿದೆ. ಇಂದು ಮಾನ್ಯ ಶಾಸಕರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ವೀಕ್ಷಣೆ ಮಾಡಿದರು. ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೇಲ್ವಿಚಾರಣೆ ಮಾಡುವಂತೆ ಸಂಬಂಧಪಟ್ಟವರಿಗೆ ಆದೇಶಿಸಿದರು.

ಹೊನ್ನಾವರ ಪ. ಪಂ. ಉಪಾಧ್ಯಕ್ಷೆ ನಿಷಾ ಮೋಹನ ಶೇಟ್, ಪ. ಪಂ. ಸದಸ್ಯ ವಿಜು ಕಾಮತ್, ಪಕ್ಷದ ಪ್ರಮುಖರಾದ ಎಮ್. ಎಸ್. ಹೆಗಡೆ ಕಣ್ಣಿ, ಎಮ್. ಆರ್. ಹೆಗಡೆ, ಹೊಸಾಕುಳಿ ಗ್ರಾ. ಪಂ. ಉಪಾಧ್ಯಕ್ಷ ಕಿರಣ ಹೆಗಡೆ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.