ಭಟ್ಕಳ: ಆಮಿನ ಪ್ಯಾಲೇಸ್ ನಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ಎಸ್.ವೈದ್ಯ ಚಾಲನೆ

ಭಟ್ಕಳ: ಅಸೋಸಿಯೇಶನ್ ಆಫ್ ಮುಸ್ಲಿಮ್ ಪ್ರೋಫೆಶನಲ್ಸ್ ಸಹಯೋಗದೊಂದಿಗೆ ಇಂಡಿಯನ್ ನವಾಯತ್ ಫೋರಂ ವತಿಯಿಂದ  ಆಮಿನ ಪ್ಯಾಲೇಸ್ ನಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ಎಸ್.ವೈದ್ಯ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಇಲ್ಲಿ ೩೦೦ಕ್ಕೂ ಹೆಚ್ಚು ಕಂಪನಿಗಳ ಉದ್ಯೋಗದಾತರು ಆಗಮಿಸಿದ್ದು ಉದ್ಯೋಗವನ್ನು ಅರಸಿ ಬಂದ ಯುವ ಜನತೆ ಇದರ ಸದೂಪಯೋಗ ಪಡೆದುಕೊಳ್ಳಬೇಕು. ನನಗೆ ಇಂತಹದ್ದೇ ಹುದ್ದೆ ಬೇಕು ಎಂಬ ಭ್ರಮೆಯಿಂದ ಹೊರಬಂದು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ಸಿನ ಹಾದಿಯನ್ನು ಕಾಣಬೇಕು. ಯಶಸ್ಸು ಅನ್ನುವುದು ಸುಮ್ಮನೆ ಕೈಕಟ್ಟಿ ಕುಳಿತುಕೊಂಡರೆ ಸಿಗದು. ಅದಕ್ಕಾಗಿ ಕಷ್ಟಪಡಬೇಕು.  ಓದಿಗೆ ತಕ್ಕಂತೆ ಉದ್ಯೋಗ ಸಿಗದೆ ಇದ್ದಲ್ಲಿ ನಿರಾಶರಾಗದೆ ಸಿಕ್ಕ ಉದ್ಯೋಗದಲ್ಲಿ ತೃಪ್ತಿಯೊಂದಿಗೆ ಕೆಸಲ ಮಾಡಿದರೆ ಮುಂದೊಂದು ದಿನ ಯಶಸ್ವಿನ ಶಿಖರವೇರಲು ಸಾಧ್ಯ ಎಂದು ಯುವಕರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಎನ್‌ಎಫ್ ಅಧ್ಯಕ್ಷ ಅರ್ಷದ್ ಮೊಹತೆಶಮ್, ಐಎನ್‌ಎಫ್ ಸಂಸ್ಥೆಯ ಸಮಾಜದ ಯುವಕರನ್ನು ಸಬಲೀಕರಣಗೊಳಿಸುವಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಇತ್ತಿಚೆಗೆ ನಡೆದ ಟ್ರೇಡ್ ಎಕ್ಸ್ಪೋ ಅತ್ಯಂತ ಯಶಸ್ವಿಯಾಗಿದ್ದು ಇಂದು ನಡೆಯುತ್ತಿರುವ ಈ ಮೇಗಾ ಉದ್ಯೋಗ ಮೇಳದಲ್ಲಿ ದೇಶ ಮತ್ತು ವಿದೇಶದ ೪೦ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಇದರಿಂದಾಗಿ ಉ.ಕ. ಜಿಲ್ಲೆಯ ೩೦೦೦ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಲಭಿಸುವ ವಿಶ್ವಾಸವಿದೆ ಎಂದರು.

ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಡಾ.ನಯನಾ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಜಿ ಮೌಲಾನ ಅಬ್ದುಲ್ ರಬ್ ನದ್ವಿ, ಖಲಿಫಾ ಜಮಾಅತ್ ಪ್ರಧಾನ ಖಾಜಿ ಮೌಲಾನ ಕ್ವಾಜಾ ಅಕ್ರಮಿ ಮದನಿ ನದ್ವಿ, ಎಎಂಪಿ ಕರ್ನಾಟದ ಪ್ರತಿನಿಧಿ ನಝೀರ್ ಆಹ್ಮದ್ ಮಾತನಾಡಿದರು.

ಐಎನ್‌ಎಫ್ ಪ್ರಧಾನ ಕಾರ್ಯದರ್ಶಿ ನೋಮಾನ್ ಪಟೇಲ್ ಸ್ವಾಗತಿ ಪ್ರಸ್ತಾವಿಕವಾಗಿ ಮಾತನಾಡಿದರು. ಉದ್ಯೋಗ ಮೇಳದ ಸಂಚಾಲಕ ಸೈಯ್ಯದ್ ಫೈಝಾನ್ ಬರ್ಮಾವರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ರಾಬಿತಾ ಸೂಸೈಟಿಯ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ, ಪ್ರಧಾನ ಕಾರ್ಯದರ್ಶಿ ಡಾ.ಅತೀಕುರ‍್ರಹ್ಮಾನ್ ಮುನಿರಿ, ಉದ್ಯಮಿ ಮುಹಮ್ಮದ್ ಯುನೂಸ್ ಖಾಝಿಯಾ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಅಂಜುಮನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ಇಂದು ನಡೆಯುತ್ತಿರುವ ಮೆಗಾ ಉದ್ಯೋಗ ಮೇಳದಲ್ಲಿ 3000 ಕ್ಕೂ ಹೆಚ್ಚು ಜನರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಒಂದು ಸಾವಿರ ಸೇಲ್ಸ್ ಮ್ಯಾನ್  ಹುದ್ದೆ, ಹೌಸ್‌ಕೀಪರ್, ಮೇಸನ್, ಅಡುಗೆಯವರು, ಅಡುಗೆ ಸಹಾಯಕ, ಸ್ಟೋರ್‌ಕೀಪರ್, ನಗದು ಕೌಂಟರ್, ನರ್ಸಿಂಗ್ ಹಾಗೂ ಮ್ಯಾನೇಜರ್,ಎಲೆಕ್ಟ್ರಿಕಲ್ ಸೂಪರ್‌ವೈಸರ್, ಇಂಜಿನಿಯರಿಂಗ್ ವಿಭಾಗ, ಐಟಿ ವಲಯ, ಲಾಜಿಸ್ಟಿಕ್ಸ್, ಅಕೌಂಟೆಂಟ್, ಮಾರ್ಕೆಟಿಂಗ್, ಕಸ್ಟಮರ್ ಕೇರ್, ಎಕ್ಸಿಕ್ಯೂಟಿವ್ಸ್, ಮ್ಯಾನುಫ್ಯಾಕ್ಚರಿಂಗ್, ರಿಯಲ್ ಎಸ್ಟೇಟ್ ಎಲ್ಲಾ ವಿಭಾಗಗಳಲ್ಲಿ ಉದ್ಯೋಗ ಲಭ್ಯವಿರುತ್ತದೆ.

ಉದ್ಯೋಗಾಕಾಂಕ್ಷಿಗಳ ಸಂದರ್ಶನಕ್ಕೆ ಮಂಗಳೂರು, ಬೆಂಗಳೂರು, ವಿಜಯವಾಡ, ಮುಂಬೈ, ಕೋಲ್ಕತ್ತಾ, ಚೆನ್ನೈ ಅಲ್ಲದೆ ಸೌದಿ ಅರೇಬಿಯಾ ಮತ್ತು ದುಬೈನಿಂದ ಕಂಪನಿಗಳ ಪ್ರತಿನಿಧಿಗಳು ಭಟ್ಕಳಕ್ಕೆ ಬಂದಿದ್ದಾರೆ ಎಂದು ಉದ್ಯೋಗ ಮೇಳದ ಸಂಚಾಲಕ ಸೈಯ್ಯದ್ ಫೈಝಾನ್ ಬರ್ಮಾವರ್ ಮಾಹಿತಿ ನೀಡಿದ್ದಾರೆ.