ಕಾಶಿ ಯಾತ್ರೆಗೆ ತೆರಳಿದ ಜನರು. ಶಾಸಕ ದಿನಕರ ಶೆಟ್ಟಿಯವರಿಂದ ಗೌರವದ ಬೀಳ್ಕೊಡುಗೆ

ಕುಮಟಾ : ಹೊನ್ನಾವರ ತಾಲೂಕಿನ ವಿವಿಧ ಊರುಗಳ 48 ಜನರು ಇಂದು ಕಾಶಿ ಯಾತ್ರೆಗೆ ತೆರಳಿದ್ದು, ಶಾಸಕ ದಿನಕರ ಶೆಟ್ಟಿಯವರು ಕರ್ಕಿ ರೈಲುನಿಲ್ದಾಣಕ್ಕೆ ತೆರಳಿ ಎಲ್ಲರನ್ನು ಗೌರವಯುತವಾಗಿ ಬೀಳ್ಕೊಟ್ಟರು. ಈ ಎಲ್ಲಾ ಯಾತ್ರಿಕರು ಹೊನ್ನಾವರದ ವಸಂತ ನಾಗಪ್ಪ ಕಾಮತ ಅವರ ನೇತೃತ್ವದಲ್ಲಿ ಯಾತ್ರೆಯನ್ನು ಕೈಗೊಂಡಿದ್ದಾರೆ.

83 ವರ್ಷ ವಯಸ್ಸಿನವರಾಗಿರುವ ವಸಂತ ನಾಗಪ್ಪ ಕಾಮತ ಅವರದ್ದು 25ನೇ ವರ್ಷದ ಕಾಶಿ ಯಾತ್ರೆ ಇದಾಗಿದೆ. ಕಳೆದ 24ವರ್ಷಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಯಾತ್ರಿಕರನ್ನು ತಮ್ಮ ಮಾರ್ಗದರ್ಶನದಲ್ಲಿ ಕಾಮತರು ಕರೆದೊಯ್ದಿದ್ದಾರೆ. ಇಂದು ರೈಲುನಿಲ್ದಾಣಕ್ಕೆ ತೆರಳಿದ ಮಾನ್ಯ ದಿನಕರ ಶೆಟ್ಟಿಯವರು ವಸಂತ ಕಾಮತ್ ಅವರಿಗೆ ಶಾಲು ಹೊದೆಸಿ ಗೌರವಿಸಿದರು. ಹಾಗೆಯೇ ಅವರೊಡನೆ ತೆರಳುತ್ತಿರುವ ಯಾತ್ರಿಕರಿಗೆ ಪ್ರಯಾಣೋಪಯೋಗಿ ವಸ್ತುಗಳ ಕಿರು ಪೊಟ್ಟಣವನ್ನು ನೀಡಿ ಎಲ್ಲರಿಗೂ ಶುಭಕೋರಿದ ಬೀಳ್ಕೊಟ್ಟರು.

ಸತೀಶ್ ಹಬ್ಬು ಅವರ ನೇತೃತ್ವದಲ್ಲಿ ನೆರವೇರಿದ ಈ ಬೀಳ್ಕೊಡುಗೆ ಸಂದರ್ಭದಲ್ಲಿ ಹೊನ್ನಾವರ ಮಂಡಲ ಬಿಜೆಪಿ ಅಧ್ಯಕ್ಷ ರಾಜು ಭಂಡಾರಿ, ನಿವೃತ್ತ ಪ್ರಾಧ್ಯಾಪಕ ಹರಿ ನಾಗೇಶ ಪೈ, ಕಡ್ಲೆ ಗ್ರಾಮಪಂಚಾಯತ್ ಅಧ್ಯಕ್ಷ ಗೋವಿಂದ ಗೌಡ, ಪಂಚಾಯತ್ ಸದಸ್ಯರುಗಳಾದ ಶಿವಾನಂದ ನಾಯ್ಕ, ಈಶ್ವರ ನಾಯ್ಕ, ಗಜಾನನ ನಾಯ್ಕ, ಪ್ರಮುಖರಾದ ಅರುಣ ಶೇಷಗಿರಿ ನಾಯ್ಕ, ದಯಾನಂದ ನಾಯ್ಕ, ರಾಮರಾಯ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.