ಮನುಷ್ಯ ಜನ್ಮ ಸಾರ್ಥಕಕ್ಕೆ ಗೀತ ಸಾರ ಅನುಸರಿಸಿ: ಶ್ರೀಮಾಧವಾನಂದ ಭಾರತೀ

ಸಿದ್ದಾಪುರ: ಮನುಷ್ಯ ಜನ್ಮ ಸಾರ್ಥಕ ಮಾಡಿಕೊಳ್ಳಲು ಭಗವದ್ಗೀತೆಯ ಸಾರ ಅನುಸರಿಸಬೇಕು ಎಂದು ಶ್ರೀಮನ್ನೆಲೆಮಾವು ಮಠಾಧೀಶರಾದ ಶ್ರೀಮಾಧವಾನಂದ ಭಾರತೀ ಮಹಾಸ್ವಾಮೀಜಿಗಳು ನುಡಿದರು.
ಶುಕ್ರವಾರ ತಾಲೂಕಿನ ಹೇರೂರು ಸೀಮೆಯ ಶ್ರೀಮನ್ನೆಲೆಮಾವು ಮಠದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಶ್ರೀಲಕ್ಷ್ಮೀನೃಸಿಂಹ ಸಂಸ್ಕೃತಿ ಸಂಪದ ಸಾಂಸ್ಕೃತಿಕ ವೇದಿಕೆಗೆ ಚಾಲನೆ ನೀಡಿ ಅವರು ಆಶೀರ್ವಚನ ನುಡಿದರು.
ಭಗವದ್ಗೀತೆಯಲ್ಲಿ ಮನುಷ್ಯನ ಸಾರ್ಥಕ ಬದುಕಿಗೆ ಮೂರು ಪ್ರಮುಖ ಮಾರ್ಗಗಳನ್ನು ಭಗವಾನ್ ಶ್ರೀಕೃಷ್ಣನೇ ಉಲ್ಲೇಖಿಸಿದ್ದಾನೆ. ಕರ್ಮ, ಜ್ಞಾನ, ಭಕ್ತಿ ಮಾರ್ಗವನ್ನು ಪ್ರಸ್ತಾಪಿಸಿದ್ದಾನೆ. ಅದರಲ್ಲಿ ಭಕ್ತಿ ಮಾರ್ಗದಲ್ಲಿ ಒಂಬತ್ತು ವಿಧದ ಭಕ್ತಿಯ‌ನ್ನು ಭಾಗವತದಲ್ಲಿ ಹೇಳಲಾಗಿದೆ. ಭಕ್ತಿ ಮಾರ್ಗದ ಸಾಧನೆಗೆ ಅದರಲ್ಲಿ ಭಜನೆಯೂ ಒಂದು‌ ಮಾರ್ಗವಾಗಿದೆ ಎಂದರು.
ಈಚೆಗಿನ‌ ದಿನಗಳಲ್ಲಿ‌ ಎಲ್ಲಡೆ ಭಜನಾ ಪ್ರವೃತ್ತಿ ಕಡಿಮೆ ಆಗುತ್ತಿದೆ. ವ್ಯವಹಾರಿಕ ಪ್ರಪಂಚದಲ್ಲಿ ಭಕ್ತಿ‌ ಮಾರ್ಗದಿಂದ ಜನರು ವಿಮುಖರಾಗಿದ್ದಾರೆ ಎಂದು ವಿಷಾದಿಸಿದ ಶ್ರೀಗಳು, ಮಕ್ಕಳಿಗೂ ಭಜನೆಯ‌ಮಹತ್ವ ತಿಳಿಸುವ ಕಾರ್ಯ ಹೆಚ್ಚಬೇಕಿದೆ ಎಂದರು.
ಜನರಲ್ಲಿ ಭಜನೆಯ ಮೂಲಕ ಭಕ್ತಿ ಮಾರ್ಗ ವೃದ್ದಿಸುವ ಹಾಗೂ ಭಗವಂತನ ಸಾಕ್ಷಾತ್ಕಾರದ ಮಾರ್ಗದೆಡೆಗೆ ಸಾಗಲು ಇಂಥ ಸಂಸ್ಕೃತಿ ಸಂಪದದಂಥ ವೇದಿಕೆಗಳು ಪ್ರೇರಣೆ ನೀಡುತ್ತವೆ. ಕಲೆ, ಕಲಾವಿದರನ್ನು ಬೆಂಬಲಿಸುವ ನಿಟ್ಟಿನಲ್ಲಿ ಸಂಸ್ಕೃತಿ ಸಂಪದ ವೇದಿಕೆ ರಚಿಸಲಾಗಿದೆ ಎಂದೂ ವಿವರಿಸಿದರು.
ಈ ವೇಳೆ ಹಿರಿಯ ವೈದಿಕ ವೆಂಕಟ್ರಮಣ ಭಟ್ಟ ಕೋಡಖಂಡ, ರವಿ ಹೆಗಡೆ ಕಂಚಿಕೈ ಇತರರು ಇದ್ದರು.
ಮಠದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು ಸ್ವಾಗತಿಸಿದರು. ಜಿ.ಆರ್.ಭಾಗವತ್ ತ್ಯಾರಗಲ್ ಪ್ರಾಸ್ತಾವಿಕ‌ ಮಾತನಾಡಿದರು. ವಿನಾಯಕ ಭಟ್ಟ ನೆಲೆಮಾವು ನಿರ್ವಹಿಸಿ ವಂದಿಸಿದರು.
ಬಳಿಕ ಶ್ರೀರಾಜರಾಜೇಶ್ವರಿ ಭಜನಾ ಮಂಡಳಿ ನೆಲೆಮಾವು, ಶ್ರೀ ದುರ್ಗಾ ಭಜನಾ ಮಂಡಳಿ ತ್ಯಾರಗಲ್ ಹುಲಿಮನೆ, ಓಂಕಾರ ಭಜನಾ ಮಂಡಳಿ ತಟ್ಟಿಕೈ, ಮಹಿಷಾಸುರಮರ್ಧಿನಿ ಭಜನಾ ಮಂಡಳಿ ಉಂಬಳಮನೆ ಬಿದ್ರಮನೆ, ಶ್ರೀಪರಮೇಶ್ವರಿ ಭಜನಾ ಮಂಡಳಿ ಉಂಚಳ್ಳಿ, ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ಹೇರೂರು, ನಾಗಚೌಡೇಶ್ವರಿ ಭಜನಾ ಮಂಡಳಿ ಕಟ್ಟಿನ ಗುಂಡಿ, ಕದಂಬೇಶ್ವರ ಭಜನಾ ಮಂಡಳಿ ಹೊಸ್ತೋಟ- ನೇರಗೋಡ, ಚೌಡೇಶ್ವರಿ ಭಜನಾ ಮಂಡಳಿ ಹಳ್ಳಿ ಬೈಲ್ ನಿರಂತರ ಐದು ಗಂಟೆಗಳ ಭಜನೆ ನಡೆಸಿದರು.