ಪೊಲೀಸರಿಗೆ ಗುದ್ದಿ ಪರಾರಿಯಾದ ವಾಹನ ಚಾಲಕ.

ಅಂಕೋಲಾ : ಬೈಕ್‌ನಲ್ಲಿ ಸಾಗುತ್ತಿದ ಇರ್ವರು ಪೊಲೀಸರಿಗೆ ಅಪಘಾತಪಡಿಸಿ ರಿಕ್ಷಾವೊಂದು ನಾಪತ್ತೆಯಾದ ಘಟನೆ ಗುರುವಾರ ನಡೆದಿದೆ. ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಎದುರಿನಲ್ಲಿ ಈ ಘಟನೆ ನಡೆದಿದ್ದು ಪೊಲೀಸರಿಬ್ಬರು ಗಾಯಗೊಂಡಿದ್ದಾರೆ.
ಅಂಕೋಲಾ ಠಾಣೆಯ ಎ.ಎಸ್.ಐ ಬಾಬು ಸೋಮಾ ಆಗೇರ(49) ಅವರಿಗೆ ಎಡಗಾಲಿಗೆ ಹಾಗೂ ಹವಾಲ್ದಾರ ಪ್ರೇಮಾನಂದ ರಾಮಾ ಗಾಂವಕರ(48) ಅವರಿಗೆ ಬೆನ್ನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಪೊಲೀಸರು ದಿನಕರ ದೇಸಾಯಿ ರಸ್ತೆಯಲ್ಲಿ ಜಿ ಸಿ ಕಾಲೇಜು ರಸ್ತೆಯಿಂದ ಅಂಕೋಲಾ ಪೊಲೀಸ್ ಠಾಣೆಯಡೆಗೆ ಬರುತ್ತಿದ್ದರು. ಕಿತ್ತೂರ್ ರಾಣಿ ಚೆನ್ನಮ್ಮ ರಸ್ತೆಯಲ್ಲಿ ರೆಹ್ಮನಿಯ ಮಸೀದಿ ಕ್ರಾಸ್ ಕಡೆಯಿಂದ ಮುಖ್ಯ ಬಸ್ ನಿಲ್ದಾಣದ ದಿಕ್ಕಿನಲ್ಲಿ ಲಗೇಜ್ ರಿಕ್ಷಾ ಚಲಾಯಿಸಿಕೊಂಡು ಬಂದ ಚಾಲಕ ಜನಸಂದಣಿಯ ಪ್ರದೇಶವಾಗಿದ್ದರೂ ಅತಿ ವೇಗದಿಂದ ವಾಹನ ಚಲಾಯಿಸಿದ ಪರಿಣಾಮ ಬೈಕ್ ಗೆ ಗುದ್ದಿದ್ದಾನೆ. ಪೊಲೀಸರು ಕೆಳಕ್ಕೆ ಬೀಳುತ್ತಿದ್ದಂತೆ ವಾಹನ ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ರಿಕ್ಷಾ ಚಾಲಕನ ವಿವರ ತಿಳಿದುಬಂದಿಲ್ಲ.