ಗೋಕರ್ಣದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ ಆರಂಭ

ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಂಪರೆಯಂತೆ ಇಂದಿನಿಂದ ಶ್ರಾವಣ ಮಾಸದ ವಿಶೇಷ ಪೂಜೆ ಶುಭಾರಂಭಗೊಂಡಿದೆ.

ನಿನ್ನೆ ಅಮಾವಸ್ಯೆಯ ದಿನ ಶ್ರೀ ಮಹಾಬಲೇಶ್ವರ ದೇವಾಲಯದ ವಿಶೇಷ ಪೂಜೆಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವಾಲಯದ ಮೇಲುಸ್ತುವಾರಿ ಸಮಿತಿಯ ಸದಸ್ಯರು ಮಹಾಗಣಪತಿ ದೇವಾಲಯದಲ್ಲಿ ಸರ್ವಾಲಂಕಾರ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಇಂದು ಬೆಳಿಗ್ಗೆ ಪ್ರಧಾನ ಅರ್ಚಕ ವೇ. ಅಮೃತೇಶ ಭಟ್ಟ ಹಿರೇ ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ವಿಶೇಷ ಪೂಜೆ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಉಪಾಧಿವಂತ ಮಂಡಲದ ಸದಸ್ಯರು, ದೇವಾಲಯದ ಸಿಬ್ಬಂದಿಗಳು, ಊರ ನಾಗರಿಕರು, ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಪೂಜೆಗಳು ಪ್ರತಿದಿನ ಬೆಳಿಗ್ಗೆ ನೆರವೇರಲಿದೆ.