ಸೋರುತ್ತಿರುವ ಇಂದಿರಾ ಕ್ಯಾಂಟೀನ್ ದುರಸ್ತಿಗೆ ವಿಷ್ಣು ನಾಯರ್ ಮನವಿ

ದಾಂಡೇಲಿ : ನಗರದ ಇಂದಿರಾ ಕ್ಯಾಂಟೀನಿನ ಕಟ್ಟಡದ ಮೇಲ್ಚಾವಣಿ ಮತ್ತು ನೀರು ಸಂಗ್ರಹಣಾ ಟ್ಯಾಂಕನ್ನು ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮವನ್ನು ಕೈಗೊಳ್ಳಬೇಕೆಂದು ನಗರದ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷರಾದ ವಿಷ್ಣು ನಾಯರ್ ಅವರು ಮನವಿ ಮಾಡಿದ್ದಾರೆ.

ಅವರು ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ, ಇಂದಿರಾ ಕ್ಯಾಂಟೀನಿನಲ್ಲಿರುವ ಸಮಸ್ಯೆಗಳನ್ನು ವಿವರಿಸಿ, ಕೂಡಲೆ ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ಇಂದಿರಾ ಕ್ಯಾಂಟೀನಿನ ಮೇಲ್ಚಾವಣಿಯ ಸಮಸ್ಯೆಯಿಂದಾಗಿ ಸೋರುತ್ತಿದ್ದು, ಗ್ರಾಹಕರಿಗೆ ಉಪಹಾರ ಹಾಗೂ ಊಟ ಸೇವನೆಗೆ ಕಷ್ಟವಾಗುತ್ತಿದೆ. ಜೊತೆಗೆ ಅಲ್ಲಿಯ ಸಿಬ್ಬಂದಿಗಳಿಗೂ ಕೆಲಸ ಕಾರ್ಯಗಳಿಗೆ ತೀವ್ರ ಅಡಚಣೆಯಾಗತೊಡಗಿದೆ. ಇನ್ನೂ ವಿದ್ಯುತ್ ಮೀಟರ್ ಅಳವಡಿಸಿರುವ ಕಡೆಯು ಸೋರುತ್ತಿದ್ದು, ಅಪಾಯ ಸಂಭವಿಸುವ ಸಾಧ್ಯತೆಯಿದೆ. ಇಂದಿರಾ ಕ್ಯಾಂಟೀನಿನ ನೀರು ಸಂಗ್ರಹಣಾ ಟ್ಯಾಂಕಿಗೂ ತ್ಯಾಜ್ಯ ನೀರು ಹಾಗೂ ಮಳೆ ನೀರು ಹರಿಯುತ್ತಿರುವುದರಿಂದ ಸಮಸ್ಯೆಗಳ ನಡುವೆಯು ಇಂದಿರಾ ಕ್ಯಾಂಟೀನ್ ಸಾರ್ವಜನಿಕರಿಗೆ ಸೇವೆಯನ್ನು ನೀಡುತ್ತಿದೆ. ಇಲ್ಲಿರುವ ಸಮಸ್ಯೆಯನ್ನು ಕೂಡಲೆ ಸರಿಪಡಿಸಬೇಕೆಂದು ವಿಷ್ಣು ನಾಯರ್ ಅವರು ಮನವಿ ಮಾಡಿದ್ದಾರೆ.