ಹಳಿಯಾಳ ಪಟ್ಟಣದ ಶಿವಾಜಿ ಪ್ರೌಢಶಾಲೆಯಲ್ಲಿ ಭಾರತ ಸೇವಾದಳದ ತಾಲ್ಲೂಕು ಮಟ್ಟದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರ

ಹಳಿಯಾಳ : ಭಾರತ ಸೇವಾ ದಳ ಇದರ ತಾಲ್ಲೂಕು ಮಟ್ಟದ ಶಿಕ್ಷಕರ ಕಾರ್ಯಗಾರವು ಹಳಿಯಾಳ ಪಟ್ಟಣದ ಶಿವಾಜಿ ಪ್ರೌಢಶಾಲೆಯಲ್ಲಿ ಜರುಗಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆಯವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಭಾರತ ಸೇವಾ ದಳವು ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಜೊತೆಗೆ ಜೀವನ ಶಿಸ್ತನ್ನು ಮೈಗೂಡಿಸಿಕೊಳ್ಳಲು ಸ್ಪೂರ್ತಿಯಾಗಿದೆ. ಭಾರತ ಸೇವಾ ದಳದಲ್ಲಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಕರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಾರತ ಸೇವಾ ದಳದ ಹಳಿಯಾಳ ತಾಲ್ಲೂಕು ಘಟಕದ ಅಧ್ಯಕ್ಷರಾದ ಶಶಿಕಾಂತ್ ಮಡಿವಾಳ ಅವರು ಭಾರತ ಸೇವಾ ದಳದ ಉದ್ದೇಶವನ್ನು ವಿವರಿಸಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಭಾರತ ಸೇವಾದಳ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸನ್ನದ್ದರನ್ನಾಗಿಸುವ ಕಾರ್ಯ ಭಾರತ ಸೇವಾದಳದ ಶಿಕ್ಷಕರದ್ದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾರತ ಸೇವಾದಳದ ಜಿಲ್ಲಾ ಸಂಘಟಕರಾದ ರಾಮಚಂದ್ರ ಹೆಗಡೆ, ಭಾರತ ಸೇವಾದಳದ ತಾಲ್ಲೂಕು ಕಾರ್ಯದರ್ಶಿ ನವೀನ್ ಪೆಟ್ಕರ್ ಹಾಗೂ ಪರಶುರಾಮ ಕಂಚನೊಳಕರ್ ಭಾಗವಹಿಸಿ ಭಾರತ ಸೇವಾದಳದ ಅನಿವಾರ್ಯತೆಯನ್ನು ವಿವರಿಸಿ, ಕಾರ್ಯಾಗಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಹಳಿಯಾಳ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯ್ತು