ಶಿವಮೊಗ್ಗ: ಐಗಿನಬೈಲು ಕ್ರಾಸ್​​​​ ಬಳಿ ಸರಣಿ ಅಪಘಾತ, ಕಾರಿನೊಳಗೆ ದನದ ಮಾಂಸ ಪತ್ತೆ

ಶಿವಮೊಗ್ಗ: ಎರಡು ಕಾರುಗಳು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಐಗಿನಬೈಲು ಕ್ರಾಸ್ ಬಳಿ ನಡೆದಿದೆ. ಅಪಘಾತಕ್ಕೀಡಾದ ಮತ್ತೊಂದು ಕಾರಿನಲ್ಲಿ ದನದ ಮಾಂಸ ಪತ್ತೆಯಾಗಿದ್ದು, ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಹೈಕೋರ್ಟ್ ನ್ಯಾಯಾಧೀಶರು ಹಾಗೂ ಶಿವಮೊಗ್ಗ ನ್ಯಾಯಾಧೀಶರು ಪ್ರತ್ಯೇಕ ಕಾರುಗಳಲ್ಲಿ ಸಿಗಂದೂರು ದೇವಿಯ ದರ್ಶನ ಪಡೆಯಲು ತೆರಳುತ್ತಿದ್ದರು. ಹೈಕೋರ್ಟ್ ಜಡ್ಜ್ ಕಾರ್ ಮೊದಲು ಮುಂದೆ ಹೋಗಿದೆ. ಇದರ ಹಿಂದಿನಿಂದ ಹೋಗುತ್ತಿದ್ದ ಶಿವಮೊಗ್ಗ ಕೋರ್ಟ್​​ ನ್ಯಾಯಾಧೀಶರ ಕಾರಿಗೆ ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ತಿರುವಿನಲ್ಲಿ ಸಾಗರದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದಿದೆ.

ನ್ಯಾಯಾಧೀಶರ ಹಿಂಬದಿಯಿಂದ ಬಂದ ಮತ್ತೊಂದು ಕಾರು ಕೂಡ ಅಪಘಾತಕ್ಕೀಡಾಗಿದೆ. ಆದರೆ ಈ ಕಾರಿನಲ್ಲಿ 50 ಕೆಜಿ ದನದ ಮಾಂಸ ಪತ್ತೆಯಾಗಿದ್ದು, ಶಿವಮೊಗ್ಗದಿಂದ ಸಾಗರಕ್ಕೆ ಇದನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಅಪಘಾತ ಬಳಿಕ ದನದ ಮಾಂಸ ಇದ್ದ ಕಾರು ಚಾಲಕ ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಆನಂದಪುರ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.