ಅಂಕೋಲಾ : ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಕ್ಕೆ ಬೆಂಕಿ – ಸುಟ್ಟು ಬೂದಿಯಾದ ಔಷಧಿ

ಅಂಕೋಲಾ: ತಾಲ್ಲೂಕಿನ ಶಾಂತಿ ಸಾಗರ ಹೋಟೆಲ್ ಪಕ್ಕದ ಚತುಷ್ಪಥ ಹೆದ್ದಾರಿಯಲ್ಲಿ ಔಷಧಿ ತುಂಬಿದ ಟಾಟಾ ಏಸ್ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ವಾಹನದೊಳಗಿದ್ದ ಔಷಧಿ ಸುಟ್ಟು ಕರಕಲಾದ ಘಟನೆ ಬುಧವಾರ ನಡೆದಿದೆ.

ಕಾರವಾರದಿಂದ  ಹೊನ್ನಾವರ ಪಶು ಆಸ್ಪತ್ರೆಗೆ ಟಾಟಾ ಏಸ್ ವಾಹನದಲ್ಲಿ ಔಷಧಿ ಸಾಗಿಸಲಾಗುತ್ತಿತ್ತು. ಊಟದ ಸಮಯವಾದುದರಿಂದ ಚಾಲಕ ವಾಹನವನ್ನು ನಿಲ್ಲಿಸಿ ಊಟಕ್ಕೆ ತೆರಳಿದ್ದ. ಇದೇ ಅವಧಿಯಲ್ಲಿ ಯಾವುದೋ ರಾಸಾಯನಿಕ ಕ್ರಿಯೆಯಿಂದ ಆಕಸ್ಮಿಕವಾಗಿ ವಾಹನದಲ್ಲಿ ಹೊಗೆಯೊಂದಿಗೆ ಚಿಕ್ಕ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ, ಅಗ್ನಿಶಾಮಕ ಠಾಣೆಗೆ ತಿಳಿಸಲಾಗಿದೆ. ತಕ್ಷಣ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಆಗಮಿಸಿ ಬೆಂಕಿ ಆರಿಸಲು ಪ್ರಯತ್ನಿಸಿದರು. ವಾಹನಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಔಷಧಿಗೆ ಬೆಂಕಿ ಹೊತ್ತಿಕೊಂಡು ಪರಿಣಾಮ ಏಕಾಏಕಿ ದೊಡ್ಡದಾಗಿ ಬೆಂಕಿ ಉರಿದಿದೆ. ಅಗ್ನಿ ಶಾಮಕ ಸಿಬ್ಬಂದಿ ಸೂಕ್ತ ಸಮಯಕ್ಕೆ ಆಗಮಿಸಿದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ.