ಅಂಕೋಲಾ: ನಿವೃತ್ತ ಶಿಕ್ಷಕರನ್ನು ಗೌರವಿಸಿ ಬೀಳ್ಕೊಡುವ ಸಂಘದ ಕಾರ್ಯ ಶ್ಲಾಘನೀಯ: ಜಿ.ಎಸ್. ನಾಯ್ಕ

ಅಂಕೋಲಾ: ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಉತ್ತಮ ಶಿಕ್ಷಕರಿಂದ ಸಾಧ್ಯವಾಗಿದೆ. ಭಾರತೀಯ ಸಂಪ್ರದಾಯದಲ್ಲಿ ಶಿಕ್ಷಕರಿಗೆ ಉನ್ನತ ಸ್ಥಾನಮಾನವಿದೆ ಎಂದು ಧಾರವಾಡ ಅಪರ ಆಯುಕ್ತ ಕಾರ್ಯಾಲಯದ ವಿಶ್ರಾಂತ ನಿರ್ದೇಶಕರಾದ ಜಿ.ಎಸ್. ನಾಯ್ಕ ಹೇಳಿದರು.
ತಾಲೂಕಿನ ಅಂಕೋಲಾ ನಗರದ ನಂ.1 ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂಕೋಲಾ ಘಟಕದಿಂದ ಹಮ್ಮಿಕೊಳ್ಳಲಾದ ವಯೋ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು. ಅಂಕೋಲಾ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ವಯೋನಿವೃತ್ತ ಶಿಕ್ಷಕರನ್ನು ಗೌರವಿಸಿ, ಬೀಳ್ಕೊಡುವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಇದು ಇತರರಿಗೆ ಆದರ್ಶಮಯವಾಗಿರಲಿ. ನಿವೃತ್ತ ಶಿಕ್ಷಕರ ವೃತ್ತಿ ಜೀವನ ಸುಖಮಯವಾಗಿರಲಿ. ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಶಿಕ್ಷಕ ವೃತ್ತಿ ಬಹಳ ಪವಿತ್ರವಾದದು. ಶಿಕ್ಷಕರ ಸೇವಾ ಮನೋಭಾವನೆ ಹಾಗೂ ಅನುಕರಣೀಯ ವ್ಯಕ್ತಿತ್ವ ಅವರನ್ನು ವಿದ್ಯಾರ್ಥಿಗಳು ಸದಾಕಾಲ ನೆನಪಿನಲ್ಲಿರಿಸುವಂತೆ ಮಾಡುತ್ತದೆ. ನಿವೃತ್ತಿಯ ನಂತರವೂ ಇಂದು ಶಿಕ್ಷಕರ ಸೇವೆ ಇಲಾಖೆಗೆ ಅಗತ್ಯವಾಗಿದೆ ಎಂದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತಾ ನಾಯಕ ಮಾತನಾಡಿ, ಜಪಾನ್‌ದಂತಹ ಮುಂದುವರೆದ ದೇಶಗಳಲ್ಲಿ ಶಿಕ್ಷಕರು ನಿತ್ಯವೂ ಗೌರವಿಸಲ್ಪಡುತ್ತಾರೆ. ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗದೆ ಕ್ರಿಯಾಶೀಲವಾಗಿ ಜೀವನವನ್ನು ನಡೆಸಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ನಿವೃತ್ತರಾಗುತ್ತಿರುವ ಶಿಕ್ಷಕರ ಜೀವನ ಸಾರ್ಥಕತೆಯಿಂದ ಕೂಡಿದೆ. ನಿವೃತ್ತಿಯೆಂದರೆ ಸಕ್ರೀಯ ಜೀವನದ ಅಂತ್ಯವಲ್ಲ. ಕೇವಲ ಒಂದು ವಿದಾಯ. ನಿವೃತ್ತ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿರುವುದು ಬೇಸರದ ಸಂಗತಿ. ನಿವೃತ್ತಿ ಹೊಂದಿದ ಶಿಕ್ಷಕರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಸಂತಸವನ್ನು ತಂದಿದೆ ಎಂದರು.

ಹಾರವಾಡ ಶಾಲಾ ಮುಖ್ಯಾಧ್ಯಾಪಕ ರೋಹಿದಾಸ್ ಕೇ ಬಂಟ್, ತೆಂಕಣಕೇರಿ ಶಾಲಾ ಶಿಕ್ಷಕಿ ಪಾರ್ವತಿ ಟಿ ನಾಯಕ, ಚಂದುಮಠ ಶಾಲಾ ಶಿಕ್ಷಕಿ ಶೈಲಜಾ ಗಾಂವಕರ,ಮೇಲಿನ ಮಂಜಗುಣಿ ಶಾಲಾ ಶಿಕ್ಷಕಿ ಗೀತಾ ಟಿ ನಾಯ್ಕ,ಅಂಕೋಲಾ ನಂ 1ಶಾಲಾ ಶಿಕ್ಷಕಿ ಶಾರದಾ ಎಸ್ ನಾಯ್ಕ, ಬೊಬ್ರುವಾಡ ಶಾಲಾ ಶಿಕ್ಷಕಿ ಶಾಂತಿ ಆರ್ ನಾಯ್ಕ ಇವರನ್ನು ಸಂಘದ ವತಿಯಿಂದ ಗೌರವಿಸಿ ಬಿಳ್ಕೊಡಲಾಯಿತು . ಸನ್ಮಾನಿತರು ಸಂಘದ ಕಾರ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತಮ್ಮ ಸೇವಾ ಅನುಭವಗಳನ್ನು ಹಂಚಿಕೊಂಡರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಭಾರತಿ ಬಿ. ನಾಯಕ, ಜಿಲ್ಲಾ ಸಹಕಾರ್ಯದರ್ಶಿ ಮಂಜುನಾಥ ಬಿ. ನಾಯಕ, ಖಜಾಂಚಿ ಶೇಖರ ಗಾಂವಕರ, ಸಂಘದ ಸದಸ್ಯರಾದ ಲಕ್ಷ್ಮೀ ಎನ್. ನಾಯಕ, ಸವಿತಾ ಬಿ. ಗಾಂವಕರ, ಆನಂದು ವಿ. ನಾಯ್ಕ, ಶೋಭಾ ಎಸ್. ನಾಯಕ, ಸಂಜೀವ ಆರ್. ನಾಯಕ, ವೆಂಕಮ್ಮ ಎಚ್. ನಾಯಕ, ವಿನಾಯಕ ಪಿ. ನಾಯ್ಕ, ಶಿಕ್ಷಕರಾದ ವೇಲಾಯುಧ ನಾಯರ, ಅರುಣ ಶೇಡಗೇರಿ ಸೇರಿದಂತೆ ನಿವೃತ್ತ ಶಿಕ್ಷಕರ ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಂಕೋಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಎಚ್. ನಾಯಕ ಸ್ವಾಗತಿಸಿದರು. ಉಪಾಧ್ಯಕ್ಷ ಮಂಜುನಾಥ ವೆಂಕಟರಮಣ ನಾಯಕ ವಂದಿಸಿದರು.