ರಾಮನಗರ ಅಕ್ರಾಲಿಯಲ್ಲಿ ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ : ಇಬ್ಬರ ಸ್ಥಿತಿ ಗಂಭೀರ

ಜೋಯಿಡಾ : ಜೋಯಿಡಾ ತಾಲೂಕಿನ ಅಕ್ರಾಲಿಯಲ್ಲಿ ಕಾರು ಮತ್ತು ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದ ಬಗ್ಗೆ ಇಂದು ಶನಿವಾರ ಸಂಜೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

ಗೋವಾ – ಬೆಳಗಾವಿ ಹೆದ್ದಾರಿಯಲ್ಲಿ ಬರುವ ಜೋಯಿಡಾ ತಾಲೂಕಿನ ರಾಮನಗರದಿಂದ ಸ್ವಲ್ಪ ದೂರದಲ್ಲಿರುವ ಅಕ್ರಾಲಿ ಎಂಬಲ್ಲಿ ಗೋವಾ ಕಡೆಯಿಂದ ರಾಮನಗರ ಕಡೆಗೆ ಬರುತ್ತಿದ್ದ ಜಿಎ 06 ಡಿ 4965 ಇಂಡಿಕಾ ಕಾರು ಮತ್ತು ರಾಮನಗರದಿಂದ ಗೋವಾ ಕಡೆಗೆ ಹೋಗುತ್ತಿದ್ದ ಜಿಎ 04 ಟಿ 3392 ಸಂಖ್ಯೆಯ ಟಿಪ್ಪರ್ ವಾಹನದ ನಡುವೆ ಮುಖಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ರಾಮಾಪುರ ಕಾಕೇರಿಯ ನಿವಾಸಿಗಳಾದ ಬಶೀರ್ ಅಬ್ದುಲ್ ಪಾಟೀಲ್ ಮತ್ತು ಸದ್ದಾಂ ಕದ್ಬುದ್ದೀನ್ ಪಾಟೀಲ್ ಎಂಬ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಗಾಯಗೊಂಡ ಇಬ್ಬರನ್ನು ತಕ್ಷಣವೇ ರಾಮನಗರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕಳುಹಿಸಿಕೊಡಲಾಗಿದೆ.

ಸ್ಥಳಕ್ಕೆ ರಾಮನಗರದ ಪಿಎಸೈ ಬಸವರಾಜ‌ ಮಬನೂರು ಮತ್ತು ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.