20 ದಿನ ನೋ ಪ್ರಾಬ್ಲಂ – ಮಳೆ ಬಾರದೆ ಇದ್ರೆ ಮೈಸೂರಿಗೆ ಕುಡಿಯುವ ನೀರಿಗೆ ಹಾಹಾಕಾರ ನಿಶ್ಚಿತ!

ಮೈಸೂರು/ಮಂಡ್ಯ: ರಾಜ್ಯ ರಾಜಧಾನಿ ನಂತರ ಮೈಸೂರು ಜಿಲ್ಲೆಗೂ ಈಗ ಕುಡಿಯುವ ನೀರಿನ ಕ್ಷಾಮ ಉಂಟಾಗೋ ಭೀತಿ ಉಂಟಾಗಿದೆ. ಕಾವೇರಿ ಕೊಳ್ಳದಲ್ಲಿ ನಿರೀಕ್ಷಿತ ಮಟ್ಟಕ್ಕೆ ಬಾರದ ಮುಂಗಾರು ಮಳೆಯ ಪರಿಣಾಮ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ದಿನಗಳು ಹತ್ತಿರದಲ್ಲೆ ಇವೆ. ಹೀಗಾಗಿ ರೈತರ ಜೊತೆಗೆ ನಗರ ವಾಸಿಗಳಲ್ಲೂ ಆತಂಕ ಹೆಚ್ಚಾಗಿದೆ.

ಕುಡಿಯುವ ನೀರಿಗಾಗಿ ಕೆಆರ್‌ಎಸ್ (KRS) ಜೊತೆಗೆ ಕಬಿನಿ ಜಲಾಶಯದ ನೀರನ್ನು ಮೈಸೂರಿಗರು ಅವಲಂಬಿಸಿದ್ದಾರೆ. ಮೈಸೂರು ನಗರ ಪ್ರದೇಶಗಳಲ್ಲಿ ನಿತ್ಯ ಕುಡಿಯಲು ಬರೋಬ್ಬರಿ 305 ಎಂಎಲ್‌ಡಿ ನೀರು ಬೇಕು. ಸದ್ಯ ನಗರಕ್ಕೆ ಅಗತ್ಯದಷ್ಟು ಕುಡಿಯುವ ನೀರು ಸರಬರಾಜು ಆಗುತ್ತಿದೆ. ಈಗ ಜಲಾಶಯದಲ್ಲಿ ಇರುವ ನೀರಿನಲ್ಲಿ 20 ದಿನಕ್ಕೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ.

ಮೈಸೂರು ಜನರು ಕಬಿನಿ ಜಲಾಶಯಕ್ಕಿಂತ ಕಾವೇರಿ ಜಲಾಶಯದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಕೆಆರ್‌ಎಸ್ ಅಣೆಕಟ್ಟಿನಿಂದ ಮೈಸೂರಿಗೆ ನಿತ್ಯ ಬರೋಬ್ಬರಿ 245 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ. ಕಬಿನಿ ಅಣೆಕಟ್ಟಿನಿಂದ 60 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ.

ಕೆಆರ್‌ಎಸ್ ಈಗ ಖಾಲಿ ಖಾಲಿ:
ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ ನೀರು ಹಾಗೂ ಹಸಿರಿನ ಸೌಂದರ್ಯದಿಂದ ಕಳೆದ ವರ್ಷ ಸರ್ಗಕ್ಕೆ ಕಿಚ್ಚು ಹಚ್ಚುವಂತೆ ಇತ್ತು. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಕಾವೇರಿ ತಾಯಿಯ ಸೌಂದರ್ಯ ಅಕ್ಷರಶಃ ಕಳೆಗುಂದಿದೆ.

ಕಳೆದ ವರ್ಷ ಇದೇ ದಿನದ ಆಸುಪಾಸಿನಲ್ಲಿ ಕೆಆರ್‌ಎಸ್ ಡ್ಯಾಂ ದೃಶ್ಯ ನೋಡಿದ್ರೆ ಕಣ್ಣಾಯಿಸಿದ ದೂರವೆಲ್ಲಾ ನೀರು, ಅದರ ಸುತ್ತೇಲ್ಲಾ ಹಸಿರಿನ ರಾಶಿ. ಈ ನೀರು ಮತ್ತು ಹಸಿರು ಎಂಬ ಎರಡು ಆಭರಣಗಳನ್ನು ಧರಿಸಿ ಕಾವೇರಿ ಮಾತೆ ಸೌಂದರ್ಯದ ದೇವತೆಯ ರೀತಿ ಕಂಗೊಳಿಸುತ್ತಾ ಇದ್ದಳು.

ಆದ್ರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ದಿನೇ ದಿನೇ ಕುಸಿತ ಕಾಣುತ್ತಿದೆ. ಇದರಿಂದ ನೀರಿನ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಒಂದು ಕಡೆ ಇದ್ರೆ, ಇನ್ನೊಂದೆಡೆ ಸೌಂದರ್ಯ ದೇವತೆ ರೀತಿಯಲ್ಲಿ ಕಂಗೊಳಿಸುತ್ತಿದ್ದ ಕಾವೇರಿ ಮಾತೆ ಕಳೆಗುಂದಿದ್ದಾಳೆ.