ವಿಚಾರಣೆಗೆ ಕರೆತಂದ ಆರೋಪಿ ಆತ್ಮಹತ್ಯೆ ಪ್ರಕರಣ: ಹೊನ್ನಾವರ ಠಾಣಾ ಪಿಐ, ಪಿಎಸ್​ಐ ಸೇರಿ ಐವರ ತಲೆದಂಡ

ಉತ್ತರ ಕನ್ನಡ: ವಿಚಾರಣೆಗೆ ಕರೆತಂದ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸ್ ಠಾಣೆಯ ಪಿಐ, ಪಿಎಸ್​ಐ ಸೇರಿ ಐವರನ್ನು ಅಮಾನತು ಮಾಡಲಾಗಿದೆ. ನಿನ್ನೆ (ಜೂನ್ 24) ಬಿಹಾರ ಮೂಲದ ವ್ಯಕ್ತಿ ಠಾಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಠಾಣೆಯ ಪಿಐ ಮಂಜುನಾಥ್, ಠಾಣೆಯ ಕ್ರೈ ಪಿಎಸ್​ಐ ಮಂಜೇಶ್ವರ್ ಚಂದಾವರ, ಪೊಲೀಸ್ ಸಿಬ್ಬಂದಿಗಳಾದ ಮಹಾವೀರ, ರಮೇಶ್, ಸಂತೋಷ್ ಅಮಾನತುಗೊಂಡಿದ್ದಾರೆ.

ಪಾಲೀಷ್ ಮಾಡಿ ಕೊಡುವ ನೆಪದಲ್ಲಿ ಬಂಗಾರ ಕದಿಯುತ್ತಿದ್ದ ಆರೋಪದ ಮೇಲೆ ಬಿಹಾರ ಮೂಲದ ಇಬ್ಬರನ್ನು ಹೊನ್ನಾವರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಪೊಲೀಸರು ಇಬ್ಬರು ಆರೋಪಿಗಳನ್ನು ವಿಚಾರಣೆಗೆಂದು ಠಾಣೆಗೆ ಕರೆದುತಂದಿದ್ದರು. ಆ ವೇಳೆ ನೀರು ಕುಡಿಯುತ್ತೇನೆ ಎಂದು ಹೇಳಿ ಬ್ಯಾಗಿನಲ್ಲಿದ್ದ ವಿಷ ಕುಡಿದಿದ್ದ. ಕೂಡಲೇ ಆತನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ, ದುರದೃಷ್ಟವಶಾತ್ ಅಷ್ಟರಾಗಲೇ ಆರೋಪಿ ಮೃತಪಟ್ಟಿದ್ದ.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಹೊನ್ನಾವರ ಠಾಣೆಯ ಪಿಐ, ಪಿಎಸ್​ಐ ಸೇರಿ ಐವರನ್ನು ಅಮಾನತು ಮಾಡಲಾಗಿದೆ.