3 ಏಜನ್ಸಿಗಳಿಂದ ಅಕ್ಕಿ ವಿತರಣೆಗೆ ತಾತ್ವಿಕ ಒಪ್ಪಿಗೆ: ವಾರದಲ್ಲಿ ಅನ್ನಭಾಗ್ಯ ಯೋಜನೆ ಭವಿಷ್ಯ ನಿರ್ಧಾರ

ಬೆಂಗಳೂರು: ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆ ಅಡಿ ರಾಜ್ಯ ಸರ್ಕಾರ 10 ಕೇಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಭರವಸೆ ನೀಡಿದೆ. ಆದರೆ ರಾಜ್ಯದಲ್ಲಿ ಅಕ್ಕಿ ದಸ್ತಾನು ಇಲ್ಲ. ಇದರಿಂದ ಕಂಗಾಲ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಕ್ಕಿ ಹಂಚುವುದು ಹೇಗೆ ಎಂದು ತೆಲೆಕೆಡಿಸಿಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಅಕ್ಕಿ ಕೊಡಿ ಎಂದು ಕೇಳಿತ್ತು. ಆದರೆ ಕೇಂದ್ರ ಅಕ್ಕಿ ನೀಡಲು ನಿರಾಕರಿಸಿದೆ. ಹೀಗಾಗಿ ಕಾಂಗ್ರೆಸ್​ ಸರ್ಕಾರ ಬೇರೆ ಬೇರೆ ರಾಜ್ಯಗಳ ಮೊರೆ ಹೋಗಿದ್ದು, ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಹೀಗೆ ಆಮದು ಮಾಡಿಕೊಂಡ ಅಕ್ಕಿಯನ್ನು ಜುಲೈ 1 ರಿಂದ ಹಂಚಲು ಸರ್ಕಾರ ನಿರ್ಧರಿಸಿದೆ. ಆದರೆ ಇದು ಇನ್ನಷ್ಟು ವಿಳಂಭವಾಗುವ ಸಾಧ್ಯತೆ ಇದೆ. ಹೌದು ಅನ್ನಭಾಗ್ಯ ಯೋಜನೆಯ ಭವಿಷ್ಯ ಒಂದು ವಾರದಲ್ಲಿ ನಿರ್ಧಾರವಾಗಲಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದ ಹಿನ್ನೆಲೆ ಕೇಂದ್ರೀಯ ಸ್ವಾಮ್ಯದ ಮೂರು ಸಂಸ್ಥೆಗಳಿಂದ ಅಕ್ಕಿ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಮೂರು ಏಜೆನ್ಸಿಗಳ ಅಕ್ಕಿಯ ದರ ಬಲು ದುಬಾರಿಯಾಗಿದೆ. ಸಾಗಾಣಿಕೆ ವೆಚ್ಚ ಸೇರಿ ಪ್ರತಿ ಕೆ.ಜಿ ಗೆ 40 ರೂ. ಅಧಿಕ ದಾಟುವ ಸಾಧ್ಯತೆ. ಇದು FCI ಪೂರೈಕೆ ಮಾಡುತ್ತಿದ್ದ ದರಕ್ಕಿಂತ ಹೆಚ್ಚಾಗಲಿದೆ.

ಹೀಗಾಗಿ ಆಹಾರ ಇಲಾಖೆ ಅಧಿಕಾರಿಗಳು ದರ ಮತ್ತು ಸಾಗಾಣಿಕೆ ವೆಚ್ಚದ ಕುರಿತು ಪ್ರಾಥಮಿಕ ಮಾಹಿತಿ ಪಡೆದಿದೆ. ಹಾಗೇ ಸರ್ಕಾರ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿಗೆ ದರ ನಿಗದಿ ಮಾಡುವಂತೆ ಮೂರು ಏಜೆನ್ಸಿಗಳಿಗೆ ಒಂದು ವಾರಗಳ ಸಮಯಾವಕಾಶ ನೀಡಿದೆ. ನಂತರ ರಾಜ್ಯ ಸರ್ಕಾರ ತನ್ನ ತೀರ್ಮಾನ ಕೈಗೊಳ್ಳಲಿದೆ.

ಹೀಗಾಗಿ ಸದ್ಯಕ್ಕೆ ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿದ್ದು, ಅಕ್ಕಿ ಖರೀದಿ ಟೆಂಡರ್ ಪ್ರಕ್ರಿಯೆ ಬಳಿಕ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.

ಕೇಂದ್ರಿಯ ಸ್ವಾಮ್ಯದ ಸಂಸ್ಥೆಗಳಿಂದ ಅಕ್ಕಿ ವಿತರಣೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಒಂದು ವಾರದೊಳಗೆ ದರದ ಮಾಹಿತಿ ನೀಡುವಂತೆ ಕೇಂದ್ರೀಯ ಸ್ವಾಮ್ಯದ ಸಂಸ್ಥೆಗಳೊಂದಿಗೆ ನಿನ್ನೆ ಚರ್ಚೆ ಮಾಡಲಾಗಿದೆ. ಒಂದು ವಾರದ ಬಳಿಕ ಅಕ್ಕಿ ವಿತರಣೆ ಬಗ್ಗೆ ಗೊಂದಲದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಟ್ರೇಡರ್ಸ್, ಮಿಲ್ಲರ್ಸ್ ಜೊತೆ ಮಾತನಾಡಿ ತೀರ್ಮಾನ ಪ್ರಕಟಿಸಲಾಗುತ್ತದೆ. ಉಚಿತ ಅಕ್ಕಿ ನೀಡಲು ರಾಜ್ಯಕ್ಕೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆ ಇದೆ. ಹೀಗಾಗಿ 3 ಸಂಸ್ಥೆಗಳಿಗೂ ದರ ನಿಗದಿ ಮಾಡಿ ನೀವೇ ತಿಳಿಸಿ ಎಂದಿದ್ದೇವೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.