ಪತ್ನಿ ವಿರುದ್ಧ ಸುಳ್ಳು ದೂರು: ಸ್ಯಾಂಟ್ರೋ ರವಿ ವಿರುದ್ಧ ಬಿ ರಿಪೋರ್ಟ್​ ಸಲ್ಲಿಸಲು ಸಿಸಿಬಿ ಸಿದ್ದತೆ

ಬೆಂಗಳೂರು: ಅತ್ಯಾಚಾರ, ವೇಶ್ಯಾವಾಟಿಕೆ, ವಂಚನೆ, ಜಾತಿ ನಿಂದನೆ ದೌರ್ಜನ್ಯ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ. ತನಿಖೆ ವೇಳೆ ಸುಳ್ಳು ಕೇಸ್​ನಲ್ಲಿ ಕಾಟನ್​ಪೇಟೆ ಇನ್ಸ್​​ಪೆಕ್ಟರ್ ಪ್ರವೀಣ್ ಶಾಮೀಲಾಗಿರವ ಬಗ್ಗೆ ಸಾಕ್ಷ್ಯ ಸಂಗ್ರಹಿಸಲಾಗಿದೆ. ಸ್ಯಾಂಟ್ರೋ ರವಿ ಷಂಡ್ಯತ್ರದಲ್ಲಿ ದೂರುದಾರ ನೆಲಮಂಗಲದ ಪ್ರಕಾಶ್, ಬಿಟಿಎಮ್​ ಲೇಔಟ್​​ನ ಶೇಖ್ ಕೈ ಜೋಡಿಸಿದ್ದರು. ಪತ್ನಿ ಮತ್ತು ನಾದಿನಿ ಇಬ್ಬರೂ ಸೇರಿ ಸಾಲ ಕೊಡುವ ನೆಪದಲ್ಲಿ ಚಾಕುವಿನಿಂದ ಇರಿದು ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ ಎಂದು ಕಾಟನ್​ಪೇಟೆ ಪೊಲೀಸ್​ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರು.

ಈ ಹಿನ್ನೆಲೆ ಸ್ಯಾಂಟ್ರೋ ರವಿ ಪತ್ನಿ ಮತ್ತು ನಾದಿನಿ ಯವರನ್ನು ಕಾಟನ್​ಪೇಟೆ ಪೋಲಿಸರು ಬಂಧಿಸಿದ್ದರು. ಆದರೆ ಪ್ರಕರಣ ಗಂಭೀರವಾಗಿದ್ದ ಹಿನ್ನಲೆ ಸಿಸಿಬಿಗೆ ಪ್ರಕರಣ ವರ್ಗಾವಣೆ ಆಗಿತ್ತು. ಸುಳ್ಳು ಪ್ರಕರಣದಲ್ಲಿ ಪ್ಲಾನ್​ನಂತೆ ಇನ್ಸ್​​ಪೆಕ್ಟರ್ ಪ್ರವೀಣ್ ಶಾಮೀಲಾಗಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆ ಇನ್ಸ್​ಪೆಕ್ಟರ್​​​ ಅನ್ನು ಅಮಾನತು ಮಾಡಲಾಗಿತ್ತು.

ಏನಿದು ಪ್ರಕರಣ

ಸ್ಯಾಂಟ್ರೋ ರವಿ ಪತ್ನಿ ಆರ್ಥಿಕ ಸಮಸ್ಯೆ ಹೇಳಿಕೊಂಡು ತನ್ನ ಬಳಿಯಿಂದ 5 ಲಕ್ಷ ರೂ ಸಾಲ ಪಡೆದು ಮೂರು ತಿಂಗಳಲ್ಲಿ ವಾಪಸ್ ನೀಡುವುದಾಗಿ ಹೇಳಿದ್ದರು. ಈ ಸಂಬಂಧ ಒಂದು ಚೆಕ್, ಪಾಸ್​​ಬುಕ್ ಜೆರಾಕ್ಸ್ ಸಹ ನೀಡಿದ್ದರು. ಆದರೆ ಹಣ ವಾಪಸ್ ನೀಡುವುದಾಗಿ ಕರೆಸಿಕೊಂಡು ಹಣ ಕೊಡದೇ ಹಲ್ಲೆ ನಡೆಸಿ ತನ್ನ ಬಳಿ ಇದ್ದ ಚಿನ್ನ ಕದ್ದು ಪರಾರಿಯಾಗಿದ್ದಾರೆ ಎಂದು ಸ್ಯಾಂಟ್ರೋ ರವಿ ತನ್ನ ಪತ್ನಿ ವಿರುದ್ಧವೇ ಶಿವಪ್ರಕಾಶ್​ ಎಂಬುವವರ ಕಡೆಯಿಂದ ದೂರು ದಾಖಲಾಗುವಂತೆ ಮಾಡಿದ್ದನು.

ಅಲ್ಲದೇ ಸ್ಯಾಂಟ್ರೋ ರವಿ ಪತ್ನಿ ಬಳಿಯಿದ್ದ ಲ್ಯಾಪ್​ಟಾಪ್​ ಅನ್ನು ಪಡೆದುಕೊಳ್ಳಲು ತನ್ನ ಪತ್ನಿಯ ವಿರುದ್ಧವೇ ಸಂಚು ರೂಪಿಸಿದ್ದ. ಇದಕ್ಕಾಗಿ ಆತ ಕಾಟನ್​ಪೇಟೆ ಠಾಣಾ ಇನ್ಸ್​ಪೆಕ್ಟರ್​ ಪ್ರವೀಣ್​ ಅವರನ್ನು ಬಳಕೆ ಮಾಡಿಕೊಂಡಿದ್ದನು. ವರ್ಗಾವಣೆ ತಡೆ ಆಮಿಷವೊಡ್ಡಿ ಇನ್ಸ್​​ಪೆಕ್ಟರ್ ಮೂಲಕ ನಕಲಿ ವಂಚನೆ ಪ್ರಕರಣ ದಾಖಲಿಸಿದ್ದನು. ಅದರಂತೆ ಇನ್ಸ್​ಪೆಕ್ಟರ್ ಮೂವರು ಅಮಾಯಕರನ್ನು ಬಂಧಿಸಿದ್ದರು. ಇವರು ಜೈಲುವಾಸ ಅನುಭವಿಸಿ ಹೊರಬಂದ ನಂತರ ಸ್ಯಾಂಟ್ರೋ ರವಿ ವಿರುದ್ಧ ಅತ್ಯಾಚಾರ, ವಂಚನೆ , ಜಾತಿನಿಂದನೆ ಸಂಬಂಧ ದೂರುಗಳನ್ನು ದಾಖಲಿಸಿದ್ದರು.