ಶಾಲೆಯಲ್ಲಿ ಬಿಸಿಯೂಟ ಸೇವಿಸಿದ್ದ 30 ಮಕ್ಕಳು‌‌ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಬೀದರ್​: ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ನಿಂಬೂರು ಸರಕಾರಿ ಪ್ರೌಢ ಶಾಲೆ ಯಲ್ಲಿ ಬಿಸಿಯೂಟ ಸೇವಿಸಿದ್ದ 30 ಮಕ್ಕಳು‌‌ ಅಸ್ವಸ್ಥರಾಗಿರುವ ಘಟನೆ ನಿನ್ನೆ(ಜೂ.23) ನಡೆದಿದೆ. ಎಂದಿನಂತೆ ಮಕ್ಕಳು ಮಧ್ಯಾಹ್ನ ಬಿಸಿ ಊಟ ಸೇವಿಸಿದ್ದರು. ಬಳಿಕ ಸಂಜೆ 5 ಗಂಟೆಯ ಸುಮಾರಿಗೆ ಮಕ್ಕಳಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಶಿಕ್ಷಕರು, ಪಾಲಕರು ಸೇರಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಮಕ್ಕಳು ‌ಅಸ್ವಸ್ಥರಾದ ಸುದ್ದಿ ತಿಳಿದು, ಹುಮ್ನಾಬಾದ್ ಬಿಜೆಪಿ ಶಾಸಕ ಡಾ. ಸಿದ್ದು ಪಾಟೀಲ್​ ಅವರು ಆಸ್ಪತ್ರೆಗೆ ಹೋಗಿ ಮಕ್ಕಳ ಆರೋಗ್ಯ ವಿಚಾಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಮಕ್ಕಳಲ್ಲಿ ಆರೋಗ್ಯ ಸುಧಾರಣೆ ಕಂಡ ಹಿನ್ನೆಲೆ ಡಿಸ್ ಜಾರ್ಜ್ ಮಾಡಿದ್ದಾರೆ.

ಇದೇ ತಿಂಗಳ ಜೂ.20 ರಂದು ಕಲಷಿತ ನೀರು ಸೇವಿಸಿ 18 ಮಂದಿ ಅಸ್ವಸ್ಥಗೊಂಡಿದ್ದ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ಕರಿಕ್ಯಾಳ ಗ್ರಾಮದಲ್ಲಿ ನಡೆದಿತ್ತು. ಅಸ್ವಸ್ಥರನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಯೋಗಕ್ಷೇಮ ವಿಚಾರಿಸಿದರು. ಇದೇ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಡಿಯುವ ನೀರಿನ ಬಾವಿಗೆ ಚರಂಡಿ ನೀರು ಮಿಶ್ರಣವಾಗಿ ಘಟನೆ ನಡೆದಿದೆ ಎಂದು ಹೇಳಲಾಗಿತ್ತು. ಇನ್ನು ಅಸ್ವಸ್ಥಗೊಂಡ 18 ಜನರ ಪೈಕಿ 6 ಮಕ್ಕಳು ಸೇರಿದ್ದರು.

ಇನ್ನು ಇದೇ ತರಹದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ನಡೆದಿತ್ತು. ಅಲ್ಲಿಯೂ ಕೂಡ 30ಕ್ಕೂ ಹೆಚ್ಚು ಜನರು ವಾಂತಿ ಬೇಧಿಯಾಗಿ ಅಸ್ವಸ್ಥಗೊಂಡಿದ್ದರು. ಆ ಪೈಕಿ ಒಂದೂವರೆ ವರ್ಷದ ಮಗು ಸೇರಿ ಮೂವರು ಸಾವನ್ನಪ್ಪಿದ್ದರು. ತಾವರಗೇರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿತ್ತು. ನಂತರ ಹೊನ್ನಮ್ಮ ಎಂಬ ವೃದ್ದೆ ಸಾವನ್ನಪ್ಪಿದ್ದರು. ಇದಾದ ಬಳಿಕ 5 ವರ್ಷದ ಬುದ್ಧಿಮಾಂದ್ಯ ಮಗುವೊಂದು ವಾಂತಿ, ಭೇದಿಗೆ ಬಲಿಯಾಗಿತ್ತು, ಈ ಕುರಿತು ಡಿಹೆಚ್​ಒ ಅವರು ‘ವಾಂತಿಯು ಶ್ವಾಸಕೋಶದಲ್ಲಿ ಸೇರಿ, ಉಸಿರಾಟದ ತೊಂದರೆ ಉಂಟಾಗಿ ಸಾವನ್ನಪ್ಪಿದೆ ಎಂದು ಸ್ಪಷ್ಟನೆ ನೀಡಿದ್ದರು.