ಪ್ರಿಯಕರನ ಜೊತೆ ಸೇರಿಕೊಂಡು ಮಗನನ್ನೇ ಕೊಂದ ತಾಯಿ; ಕಾರಣವೇನು ಗೊತ್ತಾ?

ಬೆಳಗಾವಿ: ಈ ಪೋಟೋದಲ್ಲಿರುವ ಯುವಕನ ಹೆಸರು ಹರಿಪ್ರಸಾದ್ ಬೋಸಲೆ(22)ವರ್ಷದ ಈತ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಾವಿ ಗಲ್ಲಿಯ ನಿವಾಸಿ. ಹರಿಪ್ರಸಾದ್ ಮೇ.28ರಂದು ಮನೆಯಲ್ಲಿ ಮಲಗಿದ್ದಾಗಲೇ ಶವವಾಗಿ ಹೋಗಿದ್ದ. ಈ ಕುರಿತು ಅನುಮಾನ ಯುವಕನ ತಂದೆಗೆ ಬಂದಿದ್ದು, ತನ್ನ ಮಗನ ಸಾವು ಸಹಜ ಸಾವು ಅಲ್ಲವೆಂದು ರಾಯಬಾಗ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಇದು ಸಜಹ ಸಾವಲ್ಲ, ಕೊಲೆ ಎಂದು ರಿಪೋರ್ಟ್ ಬಂದಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು ತನಿಖೆಗಿಳಿದು ವಿಚಾರಣೆ ನಡೆಸಿದಾಗ, ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯೇ ಮಗನನ್ನ ಕೊಲೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ.

ಹೌದು ಇಲ್ಲಿ ಹರಿಪ್ರಸಾದ್​ನ ತಾಯಿ ಸುಧಾ ಅಲಿಯಾಸ್ ಮಾಧವಿ ಬೋಸಲೆ ಅವರು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಡ್ರಾಮಾ ಮಾಡಿದ್ದರು. ಇನ್ನೂ ಕೊಲೆಯಲ್ಲಿ ಆರೋಪಿ ಸುಧಾಳ ಜತೆಗೆ 7 ಜನ ಭಾಗಿಯಾಗಿದ್ದು, ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇನ್ನು ಆರೋಪಿ ಸುಧಾ ಗಂಡನನ್ನ ಬಿಟ್ಟು ಪಾತ್ರೆ ಅಂಗಡಿಯನ್ನಿಟ್ಟುಕೊಂಡು ಎರಡು ಗಂಡು ಮಕ್ಕಳ ಜತೆಗೆ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದಳು. ತಾಯಿಗೆ ತಕ್ಕ ಮಗನಂತೆ ಹೇಳಿದ್ದೇಲ್ಲವನ್ನೂ ಕೇಳುತ್ತಿದ್ದ. ಈ ಮಧ್ಯೆ ಪಾತ್ರೆ ಕೊಂಡುಕೊಳ್ಳಲು ಬಂದ ಕುಮಾರ್ ಬಬಲೇಶ್ವರ್ ಎಂಬಾತನ ಜತೆಗೆ ಆರೋಪಿ ಸುಧಾ ಲವ್ವಿಡವ್ವಿ ಶುರು ಮಾಡಿಕೊಂಡಿದ್ದಳು. ಈ ವಿಚಾರ ಮಗ ಹರಿಪ್ರಸಾದ್​ಗೆ ಗೊತ್ತಾಗುತ್ತಿದ್ದಂತೆ ಆಕ್ರೋಶಗೊಂಡ ಮಗ ತಾಯಿ ಜತೆಗೆ ಜಗಳ ಮಾಡಿಕೊಂಡು ಸಂಬಂಧಿಕರಿಗೆ ಕರೆ ಮಾಡಿ ತಾಯಿಯ ವಿಚಾರ ಹೇಳಿದ್ದ.

ಆಗ ಕುಟುಂಬಸ್ಥರು ಕರೆ ಮಾಡಿ ಸುಧಾಗೆ ಬೈಯ್ದಿದ್ದರು. ಇದರಿಂದ ತನ್ನ ಅನೈತಿಕ ಸಂಬಂಧದ ವಿಚಾರ ಗೊತ್ತಾಯ್ತು, ಹೀಗೆ ಬಿಟ್ಟರೇ, ಇನ್ನೂಳಿದವರಿಗೂ ವಿಚಾರ ಗೊತ್ತಾಗಿ, ತನ್ನ ಮಾನ ಮರ್ಯಾದೆ ಹೋಗುತ್ತದೆ ಎಂದುಕೊಂಡ ಆರೋಪಿ ತಾಯಿ ಮಗನನ್ನೇ ಮುಗಿಸಲು ಸ್ಕೇಚ್ ಹಾಕಿದ್ದಳು. ಹೌದು ಪ್ರಿಯಕರ ಕುಮಾರ್ ಜತೆಗೆ ಸೇರಿಕೊಂಡು ಮೇ.28ರಂದು ರಾತ್ರಿ ಹರಿಪ್ರಸಾದ್ ಮಲಗಿದ ಮೇಲೆ ಸುಧಾ, ಚಿಕ್ಕ ಮಗ, ಆಕೆಯ ಸಹೋದರಿ ವೈಶಾಲಿ ಮಾನೆ, ಸಹೋದರಿ ಮಗ ಗೌತಮ್ ಮಾನೆ, ಪ್ರಿಯಕರ ಕುಮಾರ್ ಬಬಲೇಶ್ವರ ಸೇರಿ ಎಂಟು ಜನ ಕೊಲೆ ಮಾಡಿದ್ದಾರೆ. ಹರಿಪ್ರಸಾದ್​ನನ್ನ ಉಸಿರುಗಟ್ಟಿಸಿ, ಕತ್ತು ಹಿಸುಕಿ ಕೊಲೆ ಮಾಡಿ ನಂತರ ಎಲ್ಲರೂ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದರು.

ಇತ್ತ ಬೆಳಗ್ಗೆ ಎಳುತ್ತಿದ್ದಂತೆ ತಾಯಿ ಸುಧಾ ಮಗನಿಗೆ ಹಾರ್ಟ್ ಅಟ್ಯಾಕ್ ಆಗಿದೆಯೆಂದು ಬಾಯಿ ಬಡೆದುಕೊಂಡಿದ್ದಳು. ಈ ವೇಳೆ ಆಕೆಯ ರಂಗಿನಾಟ ಕಂಡಿದ್ದ ಗಂಡ ಸಂತೋಷ ಪೊಲೀಸರಿಗೆ ಸುಳಿವು ನೀಡಿದ್ದ. ಆತನ ಹೇಳಿಕೆಯಿಂದ ತಾಯಿ ಸುಧಾಳನ್ನ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಇನ್ನು ಎಸ್ಕೇಪ್ ಆಗಿರುವ ಪ್ರಿಯಕರ ಕುಮಾರ್ ಬಬಲೇಶ್ವರ ಸೇರಿ ನಾಲ್ಕು ಜನರ ಶೋಧ ಕಾರ್ಯ ಮುಂದುವರೆದಿದೆ. ಒಟ್ಟಾರೆ ಪಾತ್ರೆ ಕೊಳ್ಳಲು ಬಂದವನ ಜತೆಗೆ ಲವ್ವಿಡವ್ವಿ ಶುರು ಮಾಡಿಕೊಂಡು, ಅಂಗಡಿಯಲ್ಲೇ ಮಗನ ಜತೆಗೆ ಸಿಕ್ಕಿಹಾಕಿಕೊಂಡಿದ್ದಳು. ಇದನ್ನ ಪ್ರಶ್ನಿಸಿದ್ದಕ್ಕೆ ಮಗನನ್ನೇ ಕೊಂದ ತಾಯಿ ಮತ್ತು ಕುಟುಂಬಸ್ಥರು ಜೈಲು ಪಾಲಾಗಿದ್ದಾರೆ. ತಾಯಿಯಿಂದ ಒಬ್ಬ ಮಗ ಮಸಣ ಸೇರಿದ್ರೇ, ಇನ್ನೊಬ್ಬ ಮಗ ಜೈಲುಪಾಲಾಗಿದ್ದು, ಎರಡು ಮಕ್ಕಳನ್ನ ಕಳೆದುಕೊಂಡ ತಂದೆ ಅನಾಥವಾಗಿದ್ದಾನೆ.