ಮರಳು ಅಡ್ಡೆಗಳ ಮೇಲೆ ದೇವದುರ್ಗ ಶಾಸಕಿ ಕರಿಯಮ್ಮ ನಾಯಕ್​​ ದಾಳಿ

ರಾಯಚೂರು: ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಮಾಹಿತಿ ತಿಳಿದ ದೇವದುರ್ಗ ಶಾಸಕಿ ಕರಿಯಮ್ಮ ನಾಯಕ್ ಅವರು ತಮ್ಮ ಬೆಂಬಲಿಗರೊಂದಿಗೆ ದಾಳಿ ನಡೆಸಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದ ಬಳಿ ಅಕ್ರಮವಾಗಿ ಮರಳು ದಂಧೆ  ನಡೆಸಲಾಗುತ್ತಿತ್ತು. ಈ ಬಗ್ಗೆ ತಿಳಿಯುತ್ತಿದ್ದಂತೆ ಬೆಂಬಲಿಗರೊಂದಿಗೆ ದಾಳಿ ನಡೆಸಿದ ಶಾಸಕಿ, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ದೇವದುರ್ಗ  ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಜೆಸಿಬಿ, ಮೂರು ಟಿಪರ್​​ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮರಳು ದಂಧೆಯಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆಂದು ಆರೋಪ ಕೇಳಿಬಂದಿದ್ದು, ಪ್ರಕರಣ ದಾಖಲಿಸಿಕೊಂಡು ಗಣಿ, ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಕರಿಯಮ್ಮ ನಾಯಕ್ ಸೂಚನೆ ನೀಡಿದ್ದಾರೆ.

ಕಾರ್ಯಕ್ರಮ ಮುಗಿಸಿ ಹೋಗೊವಾಗ ಮರಳು ಟಿಪ್ಪರ್ ಅಡ್ಡಹಾಕಿದ ಬಗ್ಗೆ ಮಾತನಾಡಿದ ಶಾಸಕಿ ಕರಿಯಮ್ಮ ನಾಯಕ್, ನನ್ನನ್ನ ಲಾರಿ ಹತ್ತಿಸಿ ಸಾಯಿಸುತ್ತೇನೆ ಅಂತಾರೆ. ತಾಕತ್ ಇದ್ದರೆ ಬನ್ನಿ, ಇಲ್ಲೆ ಇರುತ್ತೇನೆ ಬಂದು ಕೊಲ್ಲಿ ಅಂತ ಚಾಲೆಂಜ್ ಹಾಕಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಶಾಸಕರಿಗೆ (ಶಿವನಗೌಡ ನಾಯಕ್)ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಅಲ್ಲದೆ, ಅಧಿಕಾರಿಗಳೇ ಅಕ್ರಮ ಮರಳು ದಂಧೆಗೆ ಹೊಣೆಗಾರರಾಗಿದ್ದು, ಈ ಸಂಬಂಧ ಕ್ರಮ ವಹಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.