ಮುಸ್ಲಿಮರ ಮತ ಬ್ಯಾಂಕ್ ಭದ್ರಗೊಳಿಸಲು ಪಠ್ಯಕ್ಕೆ ಕೈಹಾಕಿದ್ದಾರೆ: ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಆರೋಪ

ತುಮಕೂರು: ಸುಪ್ರೀಂಕೋರ್ಟ್​​ನಲ್ಲಿ ಹಿಜಾಬ್ ಪ್ರಕರಣ ಇದ್ದರೂ ಮತ್ತು ಮುಸ್ಲಿಮರ ಮತ ಬ್ಯಾಂಕ್ ಭದ್ರಗೊಳಿಸಲು ಪಠ್ಯಕ್ಕೆ ಕೈಹಾಕಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್  ಆರೋಪ ಮಾಡಿದ್ದಾರೆ. ನಗರದಲ್ಲಿ ಸಾವರ್ಕರ್, ಹೆಡ್ಗೆವಾರ್ ಹಾಗೂ ಸೂಲಿಬೆಲೆ ಪಠ್ಯ ಕೈ ಬಿಟ್ಟ ವಿಚಾರವಾಗಿ ಮಾತನಾಡಿದ ಅವರು, ರೈತರು, ಮಕ್ಕಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಯೋಚನೆಯೇ ಇಲ್ಲ. ಸಿದ್ದರಾಮಯ್ಯಗೆ ಕಾಣುತ್ತಿರುವುದು ಟಿಪ್ಪು ಸುಲ್ತಾನ್​ ಅಷ್ಟೇ. ಸಿದ್ದರಾಮಯ್ಯ ಹಿಂದೂ ವಿರೋಧಿ, ಇದರಲ್ಲಿ ಅನುಮಾನವೇ ಇಲ್ಲ. ರಾಜ್ಯ ಸರ್ಕಾರ ಮಕ್ಕಳಿಗೆ ಸುಳ್ಳು ಇತಿಹಾಸ ಹೇಳಲು ಹೊರಟಿದೆ ಎಂದು ವಾಗ್ದಾಳಿ ಮಾಡಿದರು.

ಸಿದ್ದರಾಮಯ್ಯ ಪಠ್ಯದಲ್ಲಿ ಏನು ಬದಲಾವಣೆ ಮಾಡಬೇಕು ಅಂತಾ ಪರಿಶೀಲನೆ ಮಾಡುತ್ತೇವೆ ಅಂತಾ ಹೇಳದೇ ಹೀಗೆ ಮಾಡುತ್ತಿದ್ದಾರೆ. ಅವರು ಬುದ್ದಿಜೀವಿ ಹಾಗೂ ಅನುಭವಿ ರಾಜಕಾರಣಿ ಹೀಗೆ ಮಾಡುತ್ತಾರೆ ಅಂತಾ ಗೊತ್ತಿರಲಿಲ್ಲ. ಅವರಿಗೆ ಇದು ಬಿಜೆಪಿ ಸರ್ಕಾರ ತಂದಿದ್ದು,ಹಾಗಾಗಿ ಇದನ್ನು ತೆಗೆಯಬೇಕು ಎಂಬುವುದು ಅಷ್ಟೇ ಅವರ ಮುಂದಿದೆ. ಎಪಿಎಮ್​​ಸಿ ಕಾಯ್ದೆ ಕೂಡ ರೈತರ ಬಳಿ ಚರ್ಚಿಸಿ ಮುಂದುವರೆಯಬೇಕಿತ್ತು ಆದರೆ ಸಿಎಂ ಹಾಗೆ ಮಾಡಿಲ್ಲ ಎಂದರು.

ದ್ವೇಷದ ರಾಜಕಾರಣ ಎಂದ ಬಿಸಿ ನಾಗೇಶ್

ಸಿದ್ದರಾಮಯ್ಯನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅಹಂಕಾರದ ರಾಜಕೀಯ ಮಾಡುತ್ತಿದ್ದಾರೆ. ಇವರು ಜನಪ್ರತಿನಿಧಿಗಳು ಅಂತಾ ಅನಿಸಿಲ್ಲ. ಇವರು ಕರ್ನಾಟಕದ ಓನರ್ಸ್ ರೀತಿಯಲ್ಲಿ ಆಡುತ್ತಿದ್ದಾರೆ. ಕಂಪನಿಯಲ್ಲಿ ಓನರ್ಸ್ ಹೇಗೆ ವರ್ತಿಸುತ್ತಾರೋ ಹಾಗೇ ಕೆಲವು ಮಂತ್ರಿಗಳು ವರ್ತಿಸುತ್ತಿದ್ದಾರೆ. ಏಕವಚನದಲ್ಲಿ ಮಾತಾಡೋದು, ಎಲ್ಲಾ ಅಭಿವೃದ್ಧಿ ಕೆಲಸ ನಿಲ್ಲಿಸಿದ್ದಾರೆ.

ಅಭಿವೃದ್ಧಿ ಬಿಟ್ಟು ಪಾರ್ಲಿಮೆಂಟ್ ಚುನಾವಣೆಗೆ ಮುಸಲ್ಮಾನರ ಮತಗಳಿಗಾಗಿ ಈ ಕೆಲಸಕ್ಕೆ ಮುಂದಾಗಿದ್ದಾರೆ. ಇದುವರೆಗೂ ಕೇಸರಿಕರಣ ಆಗಿದೆ ಅಂದರು ಎಲ್ಲಿ ಆಗಿದೆ. ಮುಸಲ್ಮಾನರಿಗೆ ಖುಷಿ ಸಿಗಲು ಹೆಡ್ಗೆವಾರ್, ಸೂಲಿಬೆಲೆ ಹಾಗೂ ಸಾವರ್ಕಯ ಪಠ್ಯ ಬದಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

ಹಸುಗಳನ್ನ ಕಡಿಯುತ್ತೇವೆ ಅಂತಾರೆ ಇದೆಲ್ಲಾ ಹಿಂದು ವಿರೋದಿ ಹೇಳಿಕೆಗಳು. ಜನಪರ ಕಾರ್ಯಕ್ರಮಗಳನ್ನ ಘೊಷಣೆ ಮಾಡಿದ್ದಾರೆ ಅವೆಲ್ಲಾ ಮಾಡುತ್ತಿದ್ದಾರಾ? ಮಕ್ಕಳಿಗೆ ಪುಸ್ತಕ, ಯೂನಿಫಾರ್ಮ್​ಗಳನ್ನ ಕಳಿಸುತ್ತಿದ್ದಾರೆ. ವಿದ್ಯುತ್ ಬಗ್ಗೆ ಗಮನ ಹರಿಸಿಲ್ಲ‌. ಇದೆಲ್ಲವೂ ಕರೆಸಿ ಯಾರ ಬಳಿಯೂ ಚರ್ಚಿಸಿಲ್ಲ ಎಂದು ಕಿಡಿಕಾರಿದ್ದಾರೆ.