ಸ್ನೇಹಿತನ ಮದುವೆಗೆ ಹೋಗಿ ಬರ್ತಿದ್ದವರು ಮಸಣ ಸೇರಿದರು : ಇಬ್ಬರ ಸಾವು, ಐವರಿಗೆ ಗಂಭೀರ

ತುಮಕೂರು (ಜೂ.14): ಮದುವೆ ಸಮಾರಂಭಗಳಿಗೆ ಸ್ನೇಹಿತರು ಒಟ್ಟಾಗಿ ಹೋಗುವುದು ಸರ್ವೇಸಾಮಾನ್ಯ. ಹೀಗೆ ದಾಬಸ್ ಪೇಟೆಯಲ್ಲಿದ್ದ ಸ್ನೇಹಿತನ ಮದುವೆಗೆ ಹೋಗಿದ್ದ 7 ಮಂದಿ ಸ್ನೇಹಿತರು ಮದುವೆ ಮುಗಿಸಿಕೊಂಡು ಕಾರಿನಲ್ಲಿ ವಾಪಸ್‌ ಬರುವಾಗ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ.

ಲಾರಿ ಹಾಗೂ ಎರ್ಟಿಗಾ ಕಾರು ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸ್ಥಳದಲ್ಲೇ‌ ಸಾವನ್ನಪ್ಪಿದ ದುರ್ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಅಗ್ರಹಾರದ ಬಳಿ ನಡೆದಿದೆ. ತಡ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಘಟನೆ ನಡೆದಿದೆ. ಸ್ನೇಹಿತನ ಮದುವೆಗೆ ತೆರಳಿ ಕೊರಟಗೆರೆ ಹಾಗೂ ಕೊಡಗೇನಹಳ್ಳಿಗೆ ವಾಪಸ್ ಬರುತಿದ್ದ ಯುವಕರ ತಂಡವು ರಸ್ತೆಯ ಮಧ್ಯಯೇ ಅಪಘಾತವಾಗಿ ಮಸಣವನ್ನು ಸೇರಿದ್ದಾರೆ. ಈ ಕಾರಿನಲ್ಲಿ ಒಟ್ಟು 7 ಮಂದಿ ಇದ್ದರು. ಗಾಯಾಳುಗಳನ್ನು ಸ್ಥಳೀಯ ಕೊರಟಗೆರೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.