ಬಾಗಲಕೋಟೆ ಡಿಸಿ ಕಚೇರಿ ಮುಂದೆ ಹೋರಾಟಗಾರನ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆಗೆ ಯತ್ನ, ಕೂದಲೆಳೆ ಅಂತರದಲ್ಲಿ ಬಚಾವ್

ಬಾಗಲಕೋಟೆ: ಅಪರಿಚಿತ ಯುವಕನೊಬ್ಬ ಕಬ್ಬಿಣದ ರಾಡ್​ನಿಂದ ಹೊಡೆದು ಕೊಲೆಗೆ ಯತ್ನಿಸಿರುವ ಭಯಾನಕ ಘಟನೆ ಬಾಗಲಕೋಟೆ ಡಿಸಿ ಕಚೇರಿ ಮುಂದೆ ನಡೆದಿದೆ. ಒಂದು ಕಡೆ ಸಚಿವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಅಧಿಕಾರಿಗಳ ಸಭೆ ನಡೆಯುತ್ತಿದ್ರೆ ಮತ್ತೊಂದೆಡೆ ಹೊರಗಡೆ ಜಿಲ್ಲಾಡಳಿತ ಭವನದ ಮುಂದೆ ಹೋರಾಟಗಾರನ ಕೊಲೆಗೆ ಯತ್ನ ನಡೆದಿದೆ. ರಾಜ್ಯ ರೈಲ್ವೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದಿನ್ ಖಾಜಿ ಅವರ ಮೇಲೆ ಯುವಕನೊಬ್ಬ ಕೊಲೆಗೆ ಯತ್ನಿಸಿದ್ದಾನೆ.

ಸಚಿವ ಆರ್.ಬಿ‌. ತಿಮ್ಮಾಪುರ ಅವರಿಗೆ ಬಾಗಲಕೋಟೆ-ಕುಡಚಿ ರೈಲ್ವೆ ಯೋಜನೆ ಬಗ್ಗೆ ಮನವಿ ಕೊಡಲು ಕುತುಬುದ್ದಿನ್ ಖಾಜಿ ಹಾಗೂ ಕೆಲವು ಹೋರಾಟಗಾರರು ಬಾಗಲಕೋಟೆ ಡಿಸಿ ಕಚೇರಿ ಬಳಿ ಆಗಮಿಸಿದ್ದರು. ಸಚಿವರಿಗೆ ಮನವಿ ಕೊಟ್ಟು ಬಂದ ಮೇಲೆ ಅಪರಿಚಿತ ಯುವಕ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಕಬ್ಬಿಣದ ರಾಡ್​ನ ಏಟು ಕಾರಿಗೆ ಬಿದ್ದಿದ್ದು ಕಾರಿನ ಹಿಂಭಾಗ ಪುಡಿ ಪುಡಿಯಾಗಿದೆ. ಮುಧೋಳ ನಗರದ ಸುಭಾಷ್ ಪಾಟೀಲ್ ಎಂಬುವರ ರಿನಾಲ್ಟ್ ಕಾರು ಜಖಂಗೊಂಡಿದೆ.

ಜಿಲ್ಲಾಡಳಿತ ಭವನ ಮುಂಭಾಗ ಹಾಡಹಗಲೆ ಕೊಲೆಗೆ ಯತ್ನ ನಡೆದಿದೆ. ಭದ್ರತಾ ಸಿಬ್ಬಂದಿ ಇಲ್ಲದಿದ್ದರೆ ನನ್ನ ಕೊಲೆ ನಡೆದೆ ಹೋಗ್ತಿತ್ತು. ಹೋಮ್ ಗಾರ್ಡ್ ರವಿ ದೂಪದ ಅವರು ನನ್ನ ರಕ್ಷಣೆಯಾಗಿದೆ ಎಂದು ಕುತುಬುದ್ದಿನ್ ಖಾಜಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಮತ್ತೊಂದೆಡೆ ಈ ಬಗ್ಗೆ ಬಾಗಲಕೋಟೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಪ್ರತಿಕ್ರಿಯಿಸಿದ್ದು ಜಿಲ್ಲಾಡಳಿತ ಭವನದ ಮುಂದೆ ಹೋರಾಟಗರರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ಏಕಾಏಕಿ ರಾಡ್ ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಸ್ಥಳದಲ್ಲಿ ಇದ್ದ ಹೋಮ್ ಗಾಡ್ಸ್ ನಿಂದ ಅವರಿಗೆ ಯಾವುದೇ ಅಪಾಯ ಆಗಿಲ್ಲ. ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನ ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಆರೋಪಿಗೂ, ಕುತುಬುದ್ದಿನ್ ಖಾಜಿಗೂ ಏನಾದ್ರೂ ದ್ವೇಷ ಇದಿಯಾ ಎನ್ನುವ ಬಗ್ಗೆ ತನಿಖೆ ಮಾಡ್ತೇವೆ. ಜಿಲ್ಲಾಡಳಿತ ಭವನದ ಮುಂದಿನ ಸಿಸಿಟಿವಿ ದೃಶ್ಯಗಳನ್ನ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.