ಬಾಡಿಗೆಗೆ ಮನೆ ಕೊಟ್ಟಿದ್ದ ಓನರ್ ಆಂಟಿಯನ್ನೇ ತುಂಡು ತುಂಡಾಗಿ ಕತ್ತರಿಸಿದ ಬಿಹಾರ ಯುವಕರು

ಅನೇಕಲ್: ದೆಹಲಿಯ ಶ್ರದ್ಧಾ ಕೊಲೆ ಪ್ರಕರಣದ ಬಳಿಕ ದೇಶದಲ್ಲಿ ಮತ್ತೆ ಮತ್ತೆ ದೇಹ ತುಂಡರಿಸಿ ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗಿ ಕಿವಿಗೆ ಬೀಳುತ್ತಲೇ ಇವೆ. ನಾಲ್ಕು ದಿನದ ಹಿಂದಷ್ಟೇ ಮಹಾರಾಷ್ಟ್ರದ ಠಾಣೆಯಲ್ಲಿ ಪ್ರಿಯತಮೆ ಕೊಂದು ಪೀಸ್ ಪೀಸ್ ಮಾಡಿ ಕುಕ್ಕರ್​ನಲ್ಲಿ ಬೇಯಿಸಿ ವಿಕೃತಿ ಮೆರೆದಿದ್ದ ಘಟನೆ ನಡೆದಿತ್ತು. ಇದೀಗ ನಮ್ಮ ರಾಜ್ಯದಲ್ಲೇ ಇಂತಹ ಬೀಭತ್ಸ ಘಟನೆ ನಡೆದಿದೆ. ಮನೆ ಬಾಡಿಗೆಗೆಂದು ಬಂದಿದ್ದ ಯುವಕರು ಒಂಟಿ ಮಹಿಳೆಯೆಂದು ತಿಳಿಯುತ್ತಿದ್ದಂತೆ ಆಕೆಯ ಮನೆಯನ್ನು ತಮ್ಮ ಹೆಸರಿಗೆ ಬರೆಯುವಂತೆ ಹಿಂಸಿಸಿ ಕೊನೆಗೆ ಕೊಂದು ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ್ದರು. ಸದ್ಯ ಸಿಕ್ಕ ತುಂಡು ದೇಹದ ಜಾಲ ಹಿಡಿದು ಹೊರಟಿದ್ದ ಪೊಲೀಸರ ಕೈಗೆ ಓರ್ವ ಸಿಕ್ಕಿ ಬಿದ್ದಿದ್ದು ಘಟನೆಯ ರಹಸ್ಯ ಬಯಲಾಗಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ವಾಸವಿದ್ದ ಐವತ್ನಾಲ್ಕು ವರ್ಷದ ಗೀತಮ್ಮ ಮೇ ತಿಂಗಳ ಅಂತ್ಯದಲ್ಲಿ ನಾಪತ್ತೆಯಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗೀತಮ್ಮಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೆ‌ ಮದುವೆ ಮಾಡಿಕೊಟ್ಟು, ಪತಿ ಸಾವಿನ ಬಳಿಕ ಒಬ್ಬಂಟಿಯಾಗಿದ್ದ ಗೀತಮ್ಮ, ಒಂದು ಮನೆಯಲ್ಲಿ ವಾಸವಿದ್ರೆ ಉಳಿದ ಎರಡು ಮನೆಗಳನ್ನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಯುವಕರಿಗೆ ಬಾಡಿಗೆಗೆ ಕೊಟ್ಟಿದ್ದರು.

ಹೇಗೋ ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆ ಗೀತಮ್ಮರ ತುಂಡರಿಸಿದ ದೇಹ ಜೂನ್ 1ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೆಟ್ಟ ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ವಾಸನೆ ಬರುತ್ತಿದ್ದ ಸ್ಥಳಕ್ಕೆ ಬಂದು ನೋಡಿದಾಗ ಕಾಲು, ಕೈ ಕತ್ತರಿಸಿದ ರುಂಡ ವಿಲ್ಲದ ದೇಹ ಪತ್ತೆಯಾಗಿತ್ತು. ಬಳಿಕವೇ ನಾಪತ್ತೆಯಾಗಿದ್ದಾರೆ ಎಂದು ತಿಳಿದಿದ್ದ ಗೀತಾ ಬರ್ಬರವಾಗಿ ಕೊಲೆಯಾಗಿದ್ದಾರೆಂಬ ವಿಚಾರ ಬೆಳಕಿಗೆ ಬಂದಿತ್ತು.

ಇನ್ನು ದೇಹದ ತುಂಡುಗಳು ಪತ್ತೆಯಾಗುತ್ತಿದ್ದಂತೆ ತಂಡ ರಚಿಸಿ ಆರೋಪಿಗಳನ್ನು ಹಿಡಿಯಲು ಸಜ್ಜಾದ ಬನ್ನೇರುಘಟ್ಟ ಪೊಲೀಸರು ಮಹಿಳೆಯ ರುಂಡಾ ಪತ್ತೆಯಾದ ಕೇವಲ ಒಂದು ವಾರದಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ಜನರ ಪೈಕಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಬಿಹಾರದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ನಾಲ್ಕು ಜನ ಯುವಕರು ಕೊಲೆಯಾದ‌ ಗೀತಾ ಮನೆಯಲ್ಲಿ ಬಾಡಿಗೆಗೆ ಇದ್ದರು. ಗೀತಾ ಒಂಟಿಯಾಗಿರುವುದನ್ನೇ ಬಂಡವಾಳ‌ ಮಾಡಿಕೊಂಡು ಮಹಿಳೆಯ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಕಾಗದ ಪತ್ರಗಳ‌ ಮೇಲೆ ಸಹಿ ಹಾಕುವಂತೆ ಬಲವಂತ ಮಾಡಿ, ನಂತರ ಕೊಲೆ ಮಾಡಿದ್ದಾರೆ ಎಂಬ ಸತ್ಯ ಬಯಲಾಗಿದೆ.

ಕೊಲೆ ಮಾಡಿದ ಆರೋಪಿಗಳು, ಕೊಲೆ ವಿಚಾರ ಗೊತ್ತಾಗದಿರಲು ದೇಹ ಬಿಸಾಡಲು ಪ್ಲ್ಯಾನ್ ಮಾಡಿದ್ದಾರೆ. ಹಂತ ಹಂತವಾಗಿ ದೇಹ ಕತ್ತರಿಸಿ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಕವರ್​ನಲ್ಲಿ ಸಾಗಿಸಿದ್ದಾರೆ. ಕೊಲೆಯಾದ‌ ಒಂದು ದಿನದ ನಂತರವೂ ಕೆಲಸಕ್ಕೆ ತೆರಳಿದ್ದ ಕಿರಾತಕರು, ಒಟ್ಟು ಎರಡು ದಿನಗಳ ವರೆಗೂ ದೇಹ ಕಟ್ ಮಾಡಿ‌ ಸಾಗಿಸಿದ್ದಾರೆ. ಕಟ್ ಮಾಡಿದ ಶವದ ಮುಂದೆಯೇ ಊಟ ಮಾಡಿದ್ದು ಕೃತ್ಯ ನಡೆದ ಮೂರು ದಿನಗಳ ಬಳಿಕ ಆರೋಪಿಗಳಿಗೆ ಭಯ ಕಾಡಲು ಶುರುವಾಗಿದೆ. ಮನೆ ಸುತ್ತಾ ಸತ್ತ ದೇಹದ ವಾಸನೆ ಪಸರಿಸುತ್ತಿದ್ದಂತೆ ನಡುಕ ಶುರುವಾಗಿದೆ. ಅದಕ್ಕೆ ಮನೆಯ ಹಿಂಭಾಗದಲ್ಲಿ ದೇಹ ಬಿಸಾಡಿ ಎಸ್ಕೇಪ್ ಆಗಿದ್ದಾರೆ. ಕಿ.ಮಿ ದೂರದಲ್ಲಿ ಸತ್ತ ಮಹಿಳೆಯ ತಲೆ,‌‌ ಒಂದು ಕೈ ಪತ್ತೆಯಾಗಿದೆ. ಹಂತಕರು ಬನ್ನೇರುಘಟ್ಟ ಪಾರ್ಕ್ ಅರಣ್ಯ ಪ್ರದೇಶದಲ್ಲಿ ರುಂಡ ಬಿಸಾಡಿದ್ದರು. ಇನ್ನು ಕೃತ್ಯದ ಮುಂಚೆ ಅತ್ಯಾಚಾರ ಆಗಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು ಪೊಲೀಸರು ಪೋಸ್ಟ್ ಮಾರ್ಟಮ್‌ ರಿಪೋರ್ಟ್ ಪರಿಶೀಲನೆ ಮಾಡಲಿದ್ದಾರೆ. ಸದ್ಯಕ್ಕೆ ಆಸ್ತಿ ವಿಚಾರವಾಗಿಯೇ ಕೊಲೆ ನಡೆದಿರುವ ಶಂಕೆ ಇದ್ದು ಮತ್ತಷ್ಟು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.