ಚಿಂತಾಮಣಿಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್​​ಗಿರಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ  ಮೆಹಬೂಬ್​​ ನಗರದಲ್ಲಿ ಯುವಕರು Moral Policing ನಡೆಸಿರುವುದು ತಿಳಿದುಬಂದಿದೆ. ಮುಸ್ಲಿಂ ಯುವತಿ ಜತೆ ಹಿಂದೂ ಯುವಕ ಇದ್ದಿದ್ದಕ್ಕೆ ಆತನ ಮೇಲೆ ಹಲ್ಲೆ ಯತ್ನ ನಡೆಸಲಾಗಿದೆ. ಜತೆಗೆ ಮುಸ್ಲಿಂ ಯುವತಿ ಮೇಲೆಯೂ ಹಲ್ಲೆಗೆ ಯತ್ನ ನಡೆಸಿದ್ದಾರೆ. ಚೇಳೂರು ಮೂಲದ ಯುವತಿ, ಚಿಂತಾಮಣಿ ಮೂಲದ ಯುವಕ ಜತೆಗೆ ಇದ್ದಾಗ ಸ್ಥಳಕ್ಕೆ ಬಂದ ಯುವಕರು ಯುವಕನನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದಲ್ಲಿ ಇನ್ಮುಂದೆ ನೈತಿಕ ಪೊಲೀಸ್​ಗಿರಿಗೆ ಅವಕಾಶ ಇಲ್ಲ, ಹೀಗೆ ಮಾಡುವವರ‌ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಇತ್ತೀಚೆಗೆ ಪೊಲೀಸ್​ ಇಲಾಖೆಗೆ ಖಡಕ್ ಸೂಚನೆ ನೀಡಿದ್ದರು. ಬಳಿಕ ಅಧಿಕಾರಿಗಳು ಕೂಡ ನೈತಿಕ ಪೊಲೀಸ್​ ಗಿರಿ ನಡೆಸುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇದಾದ ಬೆನ್ನಲ್ಲೇ ರಾಜ್ಯದ ಹಲವು ಕಡೆ ನೈತಿಕ ಪೊಲೀಸ್​ಗಿರಿ ನಡೆದಿರುವ ಬಗ್ಗೆ ವರದಿಯಾಗಿವೆ.