ಜೋಯಿಡಾ ತಾಲ್ಲೂಕಿನ ಫಣಸೋಲಿ ವನ್ಯ ಜೀವಿ ವಲಯದಲ್ಲಿ ಬೀಜ ಬಿತ್ತೋತ್ಸವ ಕಾರ್ಯಕ್ರಮ

ಜೋಯಿಡಾ : ತಾಲ್ಲೂಕಿನ ಫಣಸೋಲಿ ವನ್ಯಜೀವಿ ಅರಣ್ಯ ವಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೀಜ ಬಿತ್ತೋತ್ಸವ ಕಾರ್ಯಕ್ರಮವನ್ನು ಇಂದು ಮಂಗಳವಾರ ಹಮ್ಮಿಕೊಳ್ಳಲಾಯಿತು.

ಫಣಸೋಲಿ ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ರಶ್ಮಿ ದೇಸಾಯಿ ಅವರು ಗಿಡನೆಟ್ಟು ಬೀಜ ಬಿತ್ತುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು‌ ನೀಡಿ ಮಾತನಾಡುತ್ತಾ, ಪ್ರತಿವರ್ಷವೂ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯಂದು ಬೀಜಬಿತ್ತೋತ್ಸವ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತದೆ. ಬೀಜದ ಉಂಡೆಗಳನ್ನು ಮಾಡುವ ಮುಖ್ಯ ಉದ್ದೇಶ ಸಸಿಗಳು ಸಾಯದೆ ಚನ್ನಾಗಿ ಬೆಳೆಯಲಿ ಎಂಬುದಾಗಿದೆ, ಸರಿಯಾದ ಸಮಯದಲ್ಲಿ ಮಳೆ , ಬೆಳೆಗಳಾಗಲು ಅರಣ್ಯ ತುಂಬಾ ಮುಖ್ಯ, ಅರಣ್ಯ ಇಲ್ಲವಾದರೆ ಮಳೆಯಾಗದೆ ಭೂಮಿ ಬರಡಾಗುತ್ತದೆ, ನಾವು ಕಾಡು ಉಳಿಸದಿದ್ದರೆ ನಮ್ಮ ಮುಂದಿನ ಪೀಳಿಗೆಯ ಜನರಿಗೆ ಸಮಸ್ಯೆ ಉಂಟಾಗುವುದು ಖಚಿತ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ವನ್ಯಜೀವಿ ಮತ್ತು ಅರಣ್ಯ ಇಲಾಖೆಯ ಉಪ ವಲಯಾರಣ್ಯಾಧಿಕಾರಿಗಳು, ಅರಣ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.